ADVERTISEMENT

ಕೊಪ್ಪ: ಸರ್ಕಾರಿ ಶಾಲೆಗೆ ಮರುಜೀವ

ತೋಮರಶೆಟ್ಟಿ ಶಾಲೆಗೆ 3 ಕೊಠಡಿಗಳನ್ನು ನಿರ್ಮಿಸಿಕೊಟ್ಟ ಸತೀಶ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 2:34 IST
Last Updated 24 ಜೂನ್ 2022, 2:34 IST
ಕೊಪ್ಪದ ತೋಮರಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂರು ಕೊಠಡಿಗಳನ್ನು ನಿರ್ಮಿಸಿಕೊಟ್ಟ ಸತೀಶ್ ಶೆಟ್ಟಿ, ಜಯಶ್ರೀ ದಂಪತಿಯನ್ನು ಶಿಕ್ಷಣ ಇಲಾಖೆ ಪರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗನಾಥಸ್ವಾಮಿ ಗೌರವಿಸಿದರು.
ಕೊಪ್ಪದ ತೋಮರಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂರು ಕೊಠಡಿಗಳನ್ನು ನಿರ್ಮಿಸಿಕೊಟ್ಟ ಸತೀಶ್ ಶೆಟ್ಟಿ, ಜಯಶ್ರೀ ದಂಪತಿಯನ್ನು ಶಿಕ್ಷಣ ಇಲಾಖೆ ಪರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗನಾಥಸ್ವಾಮಿ ಗೌರವಿಸಿದರು.   

ಕೊಪ್ಪ: ಕೆಳಪೇಟೆಯಲ್ಲಿನ ತೋಮರಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ.ರುದ್ರಮ್ಮ ಮತ್ತು ದಿ.ಎರ್ಮಾಳು ವಾಸುಶೆಟ್ಟಿ ಅವರ ಸ್ಮರಣಾರ್ಥ ಅವರ ಪುತ್ರ ಕೆ.ವಿ.ಸತೀಶ್ ಶೆಟ್ಟಿ ₹40 ಲಕ್ಷ ವೆಚ್ಛದಲ್ಲಿ ನಿರ್ಮಿಸಿದ ಮೂರು ಕೊಠಡಿಗಳ ಕಟ್ಟಡವನ್ನು ಶಿಕ್ಷಣ ಇಲಾಖೆಗೆ ಗುರುವಾರ ಹಸ್ತಾಂತರಿಸಲಾಯಿತು.

ಕಟ್ಟಡ ನಿರ್ಮಿಸಿ, ದಾನ ನೀಡಿದ ಕೆ.ವಿ.ಸತೀಶ್ ಶೆಟ್ಟಿ, ಜಯಶ್ರೀ ಶೆಟ್ಟಿ ದಂಪತಿಯನ್ನು ಶಿಕ್ಷಣ ಇಲಾಖೆ ಪರವಾಗಿ ಅಭಿನಂದಿಸಿದ ಚಿಕ್ಕಮಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗನಾಥಸ್ವಾಮಿ, ‘ಮುಚ್ಚುವ ಹಂತದಲ್ಲಿದ್ದ ಶಾಲೆಗೆ ಅಗತ್ಯ ಸೌಕರ್ಯ ನೀಡುವ ಮೂಲಕ ಮರುಜೀವ ನೀಡಿದ ಸತೀಶ್ ಶೆಟ್ಟಿ ಅವರ ಸಾಮಾಜಿಕ ಸೇವೆ ಶ್ಲಾಘನೀಯ’ ಎಂದು ಬಣ್ಣಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಂತೋಣಿರಾಜ್ ಮಾತನಾಡಿ, ‘ಹಣವಿದ್ದರೂ ದಾನ ಮಾಡಲು ಮನಸ್ಸಿರುವವರ ಸಂಖ್ಯೆ ಕಡಿಮೆ. ಕೇವಲ 6 ಮಕ್ಕಳಿದ್ದ ಶಾಲೆಯನ್ನು ಸತೀಶ್ ಶೆಟ್ಟಿ ಅವರು ಅಭಿವೃದ್ಧಿಪಡಿಸಿದ್ದರಿಂದ ಇಂದು ಮಕ್ಕಳ ಸಂಖ್ಯೆ 200ಕ್ಕೆ ಏರಿದೆ. ತುಂಬಿದ ಕೊಡ ತುಳುಕುವುದಿಲ್ಲ ಎಂಬಂತೆ ಅವರ ವ್ಯಕ್ತಿತ್ವ ಮಾದರಿಯಾದದ್ದು. ಅವರ ಕುಟುಂಬವೇ ದಾನ ಧರ್ಮಕ್ಕೆ ಹೆಸರುವಾಸಿ’ ಎಂದು ಶ್ಲಾಘಿಸಿದರು.

ADVERTISEMENT

ಶಾಲೆಯ ಮುಖ್ಯ ಶಿಕ್ಷಕಿ ಶೈಲಾ ಮಾತನಾಡಿ, ‘ಬೇರೆ ಶಾಲೆಗಳಲ್ಲಿ ಕೋವಿಡ್ ಸಂದರ್ಭದಲ್ಲಿ ಶಾಲೆಯ ಅತಿಥಿ ಶಿಕ್ಷಕರಿಗೆ ವೇತನ ಪಾವತಿಯಾಗದಿದ್ದರೂ, ಸತೀಶ್ ಶೆಟ್ಟಿ ಅವರು ಇಲ್ಲಿನ ಅತಿಥಿ ಶಿಕ್ಷಕರಿಗೆ ಪ್ರತಿ ತಿಂಗಳು ತಪ್ಪದೇ ಹಣ ಪಾವತಿಸಿದ್ದಾರೆ. ಶಾಲೆಗೆ ಅಗತ್ಯವಿದ್ದ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಅವರ ಶ್ರಮ,
ಹಣ ವ್ಯರ್ಥವಾಗದಂತೆ ಕೆಲಸ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಸ್ಪಂದನ ಶೈಕ್ಷಣಿಕ ಸಮಿತಿ ಅಧ್ಯಕ್ಷ ಕೆ.ಎನ್.ಪ್ರಸನ್ನ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್, ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎಸ್.ಸುಬ್ರಹ್ಮಣ್ಯ ಶೆಟ್ಟಿ, ನಾಗರಾಜ್ ಶೆಟ್ಟಿ, ಭಾರತಿ ಶೆಟ್ಟಿ, ಜ್ಯೋತಿ ಶೆಟ್ಟಿ, ಮಿಥುನ್ ಶೆಟ್ಟಿ, ಫ್ರಾನ್ಸಿಸ್ ಕಾರ್ಡೋಜ, ಡಾ.ಮೋಹನ್ ಶೆಟ್ಟಿ, ಸತ್ಯಜಿತ್ ಶೆಟ್ಟಿ, ಸತೀಶ್ ಶೆಟ್ಟಿ ಅವರ ಪುತ್ರಿ ಶಿಫಾಲಿ, ರಾಜ್ಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಆರ್‌.ಡಿ. ರವೀಂದ್ರ,ಶಾಲಾ ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.