ADVERTISEMENT

ಶಾಲಾ ಕಟ್ಟಡ: ಕಳಪೆ ಕಾಮಗಾರಿ ಆರೋಪ

ಒಂದು ವಾರದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ತಾ.ಪಂ. ಇಒ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 4:53 IST
Last Updated 20 ಸೆಪ್ಟೆಂಬರ್ 2022, 4:53 IST
ಸುಂಕಸಾಲೆ ಗ್ರಾಮ ಪಂಚಾಯಿತಿ ಎದುರು ಸಿಪಿಎಂ ವತಿಯಿಂದ ಸೋಮವಾರ ಧರಣಿ ನಡೆಸಲಾಯಿತು.
ಸುಂಕಸಾಲೆ ಗ್ರಾಮ ಪಂಚಾಯಿತಿ ಎದುರು ಸಿಪಿಎಂ ವತಿಯಿಂದ ಸೋಮವಾರ ಧರಣಿ ನಡೆಸಲಾಯಿತು.   

ಕೊಟ್ಟಿಗೆಹಾರ: ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಹಾಗೂ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಎದುರು ಸಿಪಿಎಂ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಸಿಪಿಎಂ ಮೂಡಿಗೆರೆ ತಾಲ್ಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು, ‘ಸುಂಕಸಾಲೆ ಶಾಲಾ ಕಟ್ಟಡ ₹ 30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಕಳಪೆ ಕಾಮಗಾರಿ ಮಾಡಲಾಗಿದೆ. ನೆಲಕ್ಕೆ ಜಲ್ಲಿ ಮಿಶ್ರಿತ ಕಾಂಕ್ರೀಟ್ ಹಾಕುವ ಬದಲು ಬರೀ ಮಣ್ಣು ಹಾಕಿ ಮೇಲ್ಭಾಗಕ್ಕೆ ಸಿಮೆಂಟ್ ಮಿಶ್ರಿತ ನೀರಿನ ಲೇಪ ಹಾಕಲಾಗಿದೆ. ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಕೂಡಲೇ ಕಳಪೆ ಕಾಮಗಾರಿ ಸರಿಪಡಿಸಬೇಕು ಮತ್ತು ಕಳಪೆ ಕಾಮಗಾರಿ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸಿಪಿಎಂ ಕಳಸ ತಾಲ್ಲೂಕು ಕಾರ್ಯದರ್ಶಿ ಗೋಪಾಲ್ ಎನ್. ಶೆಟ್ಟಿ ಮಾತನಾಡಿ ‘ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ಹಲವು ಯೋಜನೆಗಳನ್ನು ಕೈಗೊಂಡಿದ್ದು, ಕೆಲವು ಯೋಜನೆಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಸರ್ಕಾರದಿಂದ ಬಿಡುಗಡೆಯಾದ ಹಣ ಯಾರ ಪಾಲಾಯಿತು ಎಂಬ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ಈ ಹಿಂದೆ 2013ರಲ್ಲಿ ನ್ಯಾಯಾಲಯ ಅರಮನೆ ತಲಗೂರು ಗ್ರಾಮದ ಸರ್ವೆ ನಂಬರ್ 80ರಲ್ಲಿ 4.20 ಎಕರೆ ಜಮೀನು ಮಂಜೂರು ಮಾಡಿದ್ದರೂ, ಸ್ಥಳೀಯ ಆಡಳಿತ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಕಾನೂನು ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ನಿರತ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹರ್ಷಕುಮಾರ್ ಭೇಟಿ, ಒಂದು ವಾರದೊಳಗೆ ಈ ಬಗ್ಗೆ ಪರಿಶೀಲಿಸಿ ಕ್ರಮಗೊಳ್ಳುವ ಭರವಸೆ ನೀಡಿದ ನಂತರ,ತಾತ್ಕಾಲಿಕವಾಗಿ ಧರಣಿ ಹಿಂಪಡೆಯಲಾಯಿತು. ಸಿಪಿಎಂ ಮುಖಂಡರಾದ ರವಿ ಸುಂಕಸಾಲೆ, ಪ್ರಶಾಂತ್, ರವಿ ಬಲಿಗೆ, ಸುಂದರ್ ಬಾಳೂರು, ಉಮೇಶ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.