ADVERTISEMENT

ಚಿಕ್ಕಮಗಳೂರು: ಮಕ್ಕಳಿಗೆ ಶಾಲಾ ಪರಿಕರ ವಿತರಣೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 9:11 IST
Last Updated 3 ಜನವರಿ 2026, 9:11 IST
ನರಸಿಂಹರಾಜಪುರ ತಾಲ್ಲೂಕು ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಅಮ್ಮ ಫೌಂಡೇಷನ್ ವತಿಯಿಂದ ಮಕ್ಕಳಿಗೆ ಶಾಲಾ ಪರಿಕರ ವಿತರಣೆ ಮಾಡಲಾಯಿತು
ನರಸಿಂಹರಾಜಪುರ ತಾಲ್ಲೂಕು ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಅಮ್ಮ ಫೌಂಡೇಷನ್ ವತಿಯಿಂದ ಮಕ್ಕಳಿಗೆ ಶಾಲಾ ಪರಿಕರ ವಿತರಣೆ ಮಾಡಲಾಯಿತು   

ಸೀತೂರು (ನರಸಿಂಹರಾಜಪುರ): ಪ್ರತಿಯೊಬ್ಬರೂ ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಕಷ್ಟದಲ್ಲಿರುವ ಬಡವರಿಗೆ ದಾನವಾಗಿ ನೀಡಬೇಕು ಎಂದು ಅಮ್ಮ ಫೌಂಡೇಷನ್‌ನ ಶೃಂಗೇರಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ್ ಹೇಳಿದರು.

ತಾಲ್ಲೂಕಿನ ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮ್ಮ ಫೌಂಡೇಷನ್ ವತಿಯಿಂದ 22 ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಶಾಲಾ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಣ ಇದ್ದವರಿಗೆಲ್ಲಾ ದಾನ ಮಾಡುವ ಮನಸ್ಸು ಇರುವುದಿಲ್ಲ. ಅಮ್ಮ ಫೌಂಡೇಷನ್ ಸಂಸ್ಥಾಪಕ ಸುಧಾಕರ ಶೆಟ್ಟರು ಕಳೆದ 15 ವರ್ಷದಿಂದಲೂ ಸಮಾಜ ಸೇವೆ ಮಾಡುತ್ತಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ಕಳೆದ 6 ವರ್ಷದಿಂದ ಫೌಂಡೇಷನ್ ಮೂಲಕ ದಾನ ಮಾಡುತ್ತಿದ್ದಾರೆ ಎಂದರು.

ADVERTISEMENT

ಅಮ್ಮ ಫೌಂಡೇಷನ್‌ನ ಶಿಕ್ಷಣ ವಿಭಾಗದ ಮುಖ್ಯಸ್ಥ ಸತೀಶ್ ಮಾಕಾರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಶಿಕ್ಷಣ ನೀಡಲಾಗುತ್ತದೆ. ಫೌಂಡೇಷನ್ ವತಿಯಿಂದ ಪ್ರತಿವರ್ಷ 60ರಿಂದ 70 ಶಾಲೆಗಳಿಗೆ ನೋಟ್‌ಬುಕ್ ಹಾಗೂ ಶಾಲಾ ಪರಿಕರ ವಿತರಿಸುತ್ತಿದ್ದು, ಅಗತ್ಯವಿರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತದೆ. ಕರೊನಾ ಸಂದರ್ಭದಲ್ಲಿ ಸುಧಾಕರ ಶೆಟ್ಟರು 12 ಸಾವಿರ ಜನರಿಗೆ ಹೆಲ್ತ್ ಕಿಟ್ ವಿತರಿಸಿದ್ದರು ಎಂದು ಹೇಳಿದರು.

ಮುಖಂಡ ಬೆಮ್ಮನೆ ಸುಬೋದ್ ಮಾತನಾಡಿ, ‘ಸುಧಾಕರ ಶೆಟ್ಟರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆ ಮಾಡುತ್ತಿದ್ದಾರೆ. ಫೌಂಡೇಷನ್ ಮೂಲಕ ಕಣ್ಣಿನ ತಪಾಸಣೆ ಶಿಬಿರ ನಡೆಸಿ, ಅಗತ್ಯ ಇದ್ದವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಫಲಾನುಭವಿಗಳಿಗೆ ಕನ್ನಡಕ ವಿತರಿಸಲಾಗಿತ್ತು. ಸುಧಾಕರ ಶೆಟ್ಟರಿಗೆ ಶೃಂಗೇರಿ ಕ್ಷೇತ್ರದ ಜನರು ಬೆಂಬಲ ನೀಡಬೇಕು’ ಎಂದರು.

ಎಸ್.ಡಿ.ಎಂ.ಸಿ. ಅಧ್ಯಕ್ಷೆ ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಸುಧಾಕರ ಶೆಟ್ಟಿ ಅವರ ಆಪ್ತ ಕಾರ್ಯದರ್ಶಿ ಪೂರ್ಣೇಶ್, ಸ್ಥಳೀಯ ಮುಖಂಡ ಅಶ್ವತ್ ನಾರಾಯಣ, ಅಮ್ಮ ಫೌಂಡೇಷನ್ ಸದಸ್ಯರಾದ ರಂಜಿತ, ಮಂಜುಳಾ, ಶಾಲಾ ಮುಖ್ಯಶಿಕ್ಷಕ ಬಸಪ್ಪ, ಸಹ ಶಿಕ್ಷಕ ಸುರೇಶ್ ಇದ್ದರು. 1ರಿಂದ 5ನೇ ತರಗತಿಯ ಮಕ್ಕಳಿಗೆ ನೋಟ್‌ಬುಕ್, ಪೆನ್ಸಿಲ್ ಹಾಗೂ 6 ಮತ್ತು 7ನೇ ತರಗತಿಯ ಮಕ್ಕಳಿಗೆ ಜಾಮಿಂಟ್ರಿ ಬಾಕ್ಸ್, ನೋಟ್‌ಬುಕ್ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.