ADVERTISEMENT

ಸರ್ಕಾರಿ ಶಾಲಾ ಜಾಗ ಖಾತೆ ಅಭಿಯಾನ ಶುರು

ದಾನಿಗಳಿಂದ ಶಾಲೆ ಹೆಸರಿಗೆ ದಾಖಲೀಕರಣ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 18:27 IST
Last Updated 9 ಜುಲೈ 2022, 18:27 IST
ಚಿಕ್ಕಮಗಳೂರಿನಲ್ಲಿ ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಅವರು ಗಾಳಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಚಂದ್ರೇಗೌಡ ಅವರಿಗೆ ಶಾಲಾ ಜಾಗದ ಖಾತೆ ದಾಖಲೆಯನ್ನು ನೀಡಿದರು.
ಚಿಕ್ಕಮಗಳೂರಿನಲ್ಲಿ ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಅವರು ಗಾಳಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಚಂದ್ರೇಗೌಡ ಅವರಿಗೆ ಶಾಲಾ ಜಾಗದ ಖಾತೆ ದಾಖಲೆಯನ್ನು ನೀಡಿದರು.   

ಚಿಕ್ಕಮಗಳೂರು: ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಜಾಗ ಖಾತೆ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ. ಈವರೆಗೆ ಎಂಟು ಶಾಲೆಗಳ ಜಾಗ ದಾಖಲೀಕರಣ ಮಾಡಲಾಗಿದೆ.

ಚಿಕ್ಕಮಗಳೂರು ವಿಭಾಗದ ಉಪ ವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಅವರು ಅಭಿಯಾನ ಶುರು ಮಾಡಿದ್ದಾರೆ. ದಾನಿಗಳ ಹೆಸರಿನಲ್ಲಿರುವ ಜಾಗವನ್ನು ಶಾಲೆ ಹೆಸರಿಗೆ ದಾಖಲೀಕರಣ ಮಾಡುವ ಪ್ರಕ್ರಿಯೆ ಕೈಗೆತ್ತಿಕೊಂಡಿದ್ದಾರೆ. ತಾಲ್ಲೂಕಿನ ಯಲಗುಡಿಗೆ, ಭಕ್ತರಹಳ್ಳಿ, ಬೀರಾಪುರ ಸಹಿತ ಎಂಟು ಗ್ರಾಮಗಳ ಶಾಲೆಗಳ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ಜೂನ್‌ 29ರಂದು ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ನಡೆಸಲಾಗಿದೆ. ಶಾಲಾ ಜಾಗಗಳ ವಿವರ ನೀಡುವಂತೆ ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಕಿರಿಯ ಪ್ರಾಥಮಿಕ – 724, ಹಿರಿಯ ಪ್ರಾಥಮಿಕ, 901 ಹಾಗೂ ಪ್ರೌಢಶಾಲೆಗಳು 356 ಇವೆ. ಚಿಕ್ಕಮಗಳೂರು ತಾಲ್ಲೂಕಿನ ಕೆಲವು ಶಾಲೆಗಳ ಮುಖ್ಯಶಿಕ್ಷಕರು ಖಾತೆ ನಿಟ್ಟಿನಲ್ಲಿ ಮನವಿ ಸಲ್ಲಿಸಿದ್ದಾರೆ.

ADVERTISEMENT

ಜಿಲ್ಲೆಯ ಶೇ 30ರಷ್ಟು ಶಾಲೆಗಳ ಜಾಗ ದಾಖಲೀಕರಣವಾಗಿಲ್ಲ. ಶಾಲೆಗೆ ಜಾಗ ದಾನ ನೀಡಿದವರು ಪೌತಿಯಾಗಿದ್ದು, ಕುಟುಂಬದವರ ಹೆಸರಿಗೆ ಖಾತೆ ವರ್ಗಾವಣೆಯಾಗಿರುವ ಪ್ರಕರಣಗಳೇ ಹೆಚ್ಚು ಇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಜಿಲ್ಲೆಯ ಮಲೆನಾಡಿನಲ್ಲಿ ಶಾಲಾ ಜಾಗ ಬಹಳಷ್ಟು ದಾಖಲೀಕರಣ ಆಗಿಲ್ಲ. ಭೂಮಿ ಬೆಲೆ ಈಗ ಹೆಚ್ಚಾಗಿದೆ ಹೀಗಾಗಿ, ಕೆಲವರು ಜಾಗದ ವಿಚಾರದಲ್ಲಿ ತಗಾದೆ ಎತ್ತಿದ್ದಾರೆ. ಕೆಲವೆಡೆ ಅರಣ್ಯ ಜಾಗ ತೊಡಕು ಇದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ರಂಗನಾಥಸ್ವಾಮಿ ತಿಳಿಸಿದರು.

ಚಿಕ್ಕಮಗಳೂರು ತಾಲ್ಲೂಕಿನ ಗಾಳಿಹಳ್ಳಿಯ ಪರ್ವತೇಗೌಡ ಅವರು ಶಾಲೆಗೆ 20 ಗುಂಟೆ ಜಾಗ ನೀಡಿದ್ದರು. ಪರ್ವತೇಗೌಡ ಅವರ ಪೌತಿಯಾಗಿದ್ದು, ಪುತ್ರ ಗಂಗಾಧರಪ್ಪ ಅವರ ಹೆಸರಿಗೆ ಖಾತೆ ವರ್ಗಾವಣೆಯಾಗಿತ್ತು. ಶಾಲೆ ಮುಖ್ಯ ಶಿಕ್ಷಕ ಚಂದ್ರೇಗೌಡ ಅವರು ಉಪ ವಿಭಾಗಾಧಿಕಾರಿಗೆ ಖಾತೆ ಮಾಡಿಸಿಕೊಡಲು ಮನವಿ ಸಲ್ಲಿಸಿದ್ದರು. ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಅವರು ಗಂಗಾಧರಪ್ಪ ಅವರೊಂದಿಗೆ ಮಾತನಾಡಿ ಶಾಲೆ ಹೆಸರಿಗೆ ಖಾತೆ ಮಾಡಿಸಿಕೊಟ್ಟಿದ್ದಾರೆ.

‘ನಮ್ಮ ತಂದೆಯವರು 1985ರಲ್ಲಿ 20 ಗುಂಟೆ ಜಾಗವನ್ನು ಶಾಲೆಗೆ ದಾನ ನೀಡಿದ್ದರು. ಜಾಗದ ಖಾತೆ ನನ್ನ ಹೆಸರಿಗಿತ್ತು. ಜಾಗವನ್ನು ಶಾಲೆ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದೇನೆ’ ಎಂದು ಗಾಳಿಹಳ್ಳಿಯ ಗಂಗಾಧರಪ್ಪ ತಿಳಿಸಿದರು.

‘ಶಾಲಾ ಜಾಗ ಖಾತೆ; ಶೀಘ್ರದಲ್ಲಿ ಅದಾಲತ್‌ ಆಯೋಜನೆ’

‘ಶಾಲಾ ಜಾಗ ಖಾತೆ ನಿಟ್ಟಿನಲ್ಲಿ ಚಿಕ್ಕಮಗಳೂರು ತಾಲ್ಲೂಕುಮಟ್ಟದ ಅದಾಲತ್‌ ಅನ್ನು ಶೀಘ್ರದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ’ ಎಂದು ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ತಿಳಿಸಿದರು.

‘ಶಾಲಾ ಜಾಗ ಖಾತೆ ದಾಖಲೀಕರಣ ಮಾಡಿ, ಒತ್ತುವರಿ ತೆರವುಗೊಳಿಸಿ, ಖಾತ್ರಿ ಯೋಜನೆಯಡಿ ಶಾಲೆ ಜಾಗಕ್ಕೆ ಬೇಲಿ ಅಳವಡಿಸಲಾಗುವುದು. ಈ ನಿಟ್ಟಿನಲ್ಲಿ ಕಾರ್ಯಗತವಾಗಿದ್ದೇವೆ’ ಎಂದು ಅವರು ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.