ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ಶೋಭಾಯಾತ್ರೆ ನಗರದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ನಗರದ ರತ್ನಗಿರಿ ರಸ್ತೆಯ ಕಾಮಧೇನು ಮಹಾಶಕ್ತಿ ಗಣಪತಿ ದೇವಾಲಯ ಆವರಣದಿಂದ ಸಂಜೆ ಮೆರವಣಿಗೆ ಹೊರಟಿತು. ಅಲಂಕೃತ ವಾಹನದಲ್ಲಿ ಗುರುದತ್ತಾತ್ರೇಯರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ನಾಡಿನ ವಿವಿಧೆಡೆಯ ಸಾವಿರಾರು ದತ್ತಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಶ್ರೀರಾಮ ಸೇರಿ ಹಲವು ಸ್ತಬ್ಧಚಿತ್ರಗಳು ಮೆರವಣಿಗೆಯ ಆಕರ್ಷಣೆಯಾಗಿದ್ದವು. ಪಟಾಕಿ ಸದ್ದು, ಸಾಂಸ್ಕೃತಿಕ ಕಲಾ ತಂಡಗಳ ಮೆರುಗಿನಲ್ಲಿ ಶೋಭಾಯಾತ್ರೆ ಸಾಗಿತು. ಭಗವಧ್ವಜಗಳ ಹಾರಾಟ ಜೋರಾಗಿತ್ತು. ಡಿ.ಜೆ ಅಬ್ಬರ, ಹಾಡು, ಸಂಗೀತಕ್ಕೆ ಯುವಕ –ಯುವತಿಯುರು ಕುಣಿದು ಕುಪ್ಪಳಿಸಿದರು.
ಮಾರ್ಗದುದ್ದಕ್ಕೂ ಇಕ್ಕೆಲಗಳಲ್ಲಿ ಕಟ್ಟಡಗಳ ಮಹಡಿಗಳಲ್ಲಿ ನಿಂತಿದ್ದ ಜನರು ಶೋಭಾ ಯಾತ್ರೆ ವೀಕ್ಷಿಸಿದರು. ಮೊಬೈಲ್ಫೋನ್ ಕ್ಯಾಮೆರಾಗಳಲ್ಲಿ ಮೆರವಣಿಗೆ ಚಿತ್ರವನ್ನು ಕ್ಲಿಕ್ಕಿಸಿಕೊಂಡರು. ವೀರಗಾಸೆ ಕಲಾವಿದರೊಂದಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕೂಡ ತಮಟೆ ಸದ್ದಿಗೆ ಹೆಜ್ಜೆ ಹಾಕಿದರು. ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಮುಖಂಡರಾದ ಡಿ.ಎನ್.ಜೀವರಾಜ್ ಭಾಗವಹಿಸಿದ್ದರು. ಹೆಜ್ಜೆ ಹೆಜ್ಜೆಗೂ ಪೊಲೀಸರು ಭದ್ರತೆ ಒದಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.