ADVERTISEMENT

ಚಿಕ್ಕಮಗಳೂರು: ತಮ್ಮನಿಗೆ ಗುಂಡಿಕ್ಕಿ ಕೊಂದ ಅಣ್ಣ

ಜಮೀನು ವಿಚಾರಕ್ಕೆ ಸಹೋದರರ ಜಗಳ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 11:37 IST
Last Updated 28 ಏಪ್ರಿಲ್ 2020, 11:37 IST
ಮಂಜಯ್ಯ
ಮಂಜಯ್ಯ   

ಚಿಕ್ಕಮಗಳೂರು: ಜಮೀನು ವಿಚಾರದಲ್ಲಿ ಸಹೋದರರ ನಡುವಿನ ಮನಸ್ತಾಪ ತಾರಕಕ್ಕೇರಿ ಅಣ್ಣ ಲಕ್ಷ್ಮಣ ಗುಂಡು ಹಾರಿಸಿ ತಮ್ಮ ಮಂಜಯ್ಯ(60) ಅಲಿಯಾಸ್‌ ಶ್ರೀಕಂಠನನ್ನು ಕೊಲೆಗೈದಿರುವುದು ಮೂಡಿಗೆರೆ ತಾಲ್ಲೂಕಿನ ಬಣಕಲ್‌ ಹೋಬಳಿಯ ಚೇಗು ಗ್ರಾಮದಲ್ಲಿ ನಡೆದಿದೆ.

ಸೋಮವಾರ ರಾತ್ರಿ 9.30ರ ಹೊತ್ತಿಗೆ ಕೃತ್ಯ ನಡೆದಿದೆ. ಗುಂಡೇಟು ತಗುಲಿ ಕುಸಿದುಬಿದ್ದಿದ್ದ ಮಂಜಯ್ಯ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಎದೆಯ ಕೆಳಭಾಗಕ್ಕೆ ಗುಂಡು ಹೊಕ್ಕಿದೆ.

ಲಕ್ಷ್ಮಣನನ್ನು ಹಿಡಿದು ದೂಡಿದಾಗ ಆತನಿಗೆ ಪೆಟ್ಟಾಗಿದೆ. ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

‘ತೋಟದ ಪಕ್ಕ ಹಳ್ಳ ಹಾದುಹೋಗಿರುವ ಜಾಗದಲ್ಲಿ ಮಂಜಯ್ಯ ಅವರು ಸೋಮವಾರ ಮಧ್ಯಾಹ್ನ ಹೊಂಡದಿಂದ ಜೆಸಿಬಿಯಲ್ಲಿ ಮಣ್ಣು ತೆಗೆಸುವಾಗ ಲಕ್ಷ್ಮಣ ತಗಾದೆ ತೆಗೆದು ಇಬ್ಬರಿಗೂ ವಾಗ್ವಾದ ನಡೆದಿದೆ. ಮನೆಗೆ ಬಂದ ಲಕ್ಷ್ಮಣ ತೋಟದಿಂದ ತಮ್ಮ ಬರುವುದನ್ನು ಕಾದಿದ್ದು, ರಾತ್ರಿ 9.30ರ ಸುಮಾರಿಗೆ ದಾರಿಯಲ್ಲಿ ಆತ ಬರುವಾಗ ನೋಡಿ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಡಿವೈಎಸ್ಪಿ ಬಸಪ್ಪ ಅಂಗಡಿ, ಇನ್‌ಸ್ಪೆಕ್ಟರ್‌ ಜಗನ್ನಾಥ್‌, ಪಿಎಸ್‌ಐ ಶ್ರೀನಾಥ್‌ ರೆಡ್ಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದಾರೆ.

ಬಣಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.