ಶೃಂಗೇರಿ: ಶೃಂಗೇರಿ ಶಾರದಾ ಮಠದಲ್ಲಿ ಶುಕ್ರವಾರ ತುಂಗಾ ಪುಷ್ಕರ ಮಹೋತ್ಸವಕ್ಕೆ ವಿದ್ಯಾಶಂಕರ ದೇಗುಲದ ಬಳಿ ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತಿ ಸ್ವಾಮೀಜಿ ಅವರು ಚಾಲನೆ ನೀಡಿದರು.
ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ತುಂಗಾ ನದಿಗೆ ಕಲ್ಪೋಕ್ತ ಪೂಜೆ ನೆರವೇರಿದ ಬಳಿಕ, ತುಂಗಾ ಕಲಶವನ್ನು ಉತ್ಸವದ ಮೂಲಕ ತರಲಾಯಿತು. ಮಠದ ಒಳಾಂಗಣದಲ್ಲಿ ಮಠದ ಆನೆಗಳು, ವಾದ್ಯಗೋಷ್ಠಿಗಳೊಂದಿಗೆ ಉತ್ಸವ ನಡೆಯಿತು. ಬಳಿಕ ಶಾರದಾಂಬೆ, ಶಂಕರ ಭಗವತ್ಪಾದ ಹಾಗೂ ವಿದ್ಯಾಶಂಕರ ದೇಗುಲದ ಸನ್ನಿಧಿಯಲ್ಲಿ ಅಭಿಷೇಕ ಹಾಗೂ ವಿಶೇಷಪೂಜೆ ನೆರವೇರಿತು.
ತುಂಗಾ ನದಿ ಸಮೀಪ ಕಿರಿಯ ಗುರುಗಳಾದ ವಿಧುಶೇಖರಭಾರತಿ ಸ್ವಾಮೀಜಿ ಅವರು ಗಂಗಾ ಪೂಜೆ ನೇರವೆರಿಸಿದರು. ವಿದ್ಯಾಶಂಕರ ದೇವರ ಸನ್ನಿಧಿಯಲ್ಲಿ ಮಹಾರುದ್ರ ಪುರಶ್ಚರಣೆಯನ್ನು ಋತ್ವಿಜರು ನೆರವೇರಿಸಿದರು. ಶುಕ್ರವಾರವಾದ ಕಾರಣ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ಶಾರದೆ ಸನ್ನಿಧಿಯಲ್ಲಿ ವಿಶೇಷಪೂಜೆ ಸಲ್ಲಿಸಲು ಪರವೂರಿನ ಭಕ್ತರು ಸೇರಿದ್ದರು.
ಮಠದ ಆವರಣದಲ್ಲಿರುವ ಸುಬ್ರಹ್ಮಣ್ಯಸ್ವಾಮಿ ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕೃತಗೊಳಿಸಿ ತೆಪ್ಪೋತ್ಸವ ನೆರವೇರಿಸಿ, ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು.
ತಾಲ್ಲೂಕಿನ ಭಕ್ತರು ತುಂಗಾನದಿಯಲ್ಲಿ ಮುಂಜಾವಿನಲ್ಲಿ ಸ್ನಾನ ನೆರವೇರಿಸಿ ತರ್ಪಣ ಮಾಡಿದರು.
ಶಾರದಾ ಮಠದ ಆವರಣ ಹಾಗೂ ತುಂಗಾ ನದಿಯ ದಂಡೆಯನ್ನು ಪುಷ್ಕರ ಮಹೋತ್ಸವದ ಅಂಗವಾಗಿ ದೀಪಾಲಕೃತಗೊಳಿಸಲಾಯಿತು.
ಸ್ಯಾನಿಟೈಸರ್ ಬಳಕೆ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮುಂತಾದ ಕೋವಿಡ್ ನಿಯಮಕ್ಕೆ ಪ್ರಾಮುಖ್ಯತೆ ನೀಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.