
ಶೃಂಗೇರಿ: ಕ್ರಿಸ್ಮಸ್ ರಜೆ ಹಾಗೂ ವರ್ಷಾಂತ್ಯದ ಹಿನ್ನಲೆಯಲ್ಲಿ ಶೃಂಗೇರಿಯ ಶಾರದಾ ಪೀಠಕ್ಕೆ ಗುರುವಾರ ಪ್ರವಾಸಿಗರ ದಂಡು ಹರಿದು ಬಂದಿದೆ.
ಪಟ್ಟಣದ ವಾಹನ ನಿಲುಗಡೆ ಸ್ಥಳವಾದ ಗಾಂಧಿ ಮೈದಾನದಲ್ಲಿ ಪ್ರವಾಸಿ ವಾಹನದ ಸಾಲು ಹಾಗೂ ಶಾರದಾ ಮಠದ ಎದುರು ಭಕ್ತಾದಿಗಳ ಸಾಲು ಕಂಡು ಬಂದಿದೆ. ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆ ಅಲ್ಲದೇ ಪಟ್ಟಣದ ಎಲ್ಲಾ ರಸ್ತೆಯಲ್ಲೂ ಪ್ರವಾಸಿಗರ ವಾಹನ ನಿಲುಗಡೆ ಕಂಡು ಬಂತು. ತಾಲ್ಲೂಕಿನ ಕಿಗ್ಗಾ ಶಾಂತ ಸಮೇತ ಋಷ್ಯಶೃಂಗ ಸ್ವಾಮಿ ದೇವಸ್ಥಾನ, ದುರ್ಗಾ ದೇವಸ್ಥಾನ, ಕಾಳಿಕಾಂಬ ದೇವಸ್ಥಾನ, ಕಾಲಭೈರವ ದೇವಸ್ಥಾನ ಮತ್ತು ಸಿರಿಮನೆ ಪಾಲ್ಸ್ಗಳಲ್ಲಿ ಪ್ರವಾಸಿಗರು ಭೇಟಿ ನೀಡಿದರು.
ಪಟ್ಟಣದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಅಂಗಡಿ, ಹೋಟೆಲ್, ಹೋಂಸ್ಟೇ, ವಸತಿ ಗೃಹಗಳು ಮತ್ತು ಇತರ ವ್ಯಾಪಾರ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ.
ಶಾರದಾ ಮಠದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಇದ್ದು, ನಿತ್ಯ 20 ಸಾವಿರಕ್ಕೂ ಹೆಚ್ಚು ಜನರು ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ. ಹೆಚ್ಚಿನ ಪ್ರವಾಸಿಗರಿಂದ ವಿವಿಧ ರೀತಿಯ ಪೂಜೆ ಪುರಸ್ಕಾರಗಳು ನಡೆಯುವುದರಿಂದ ಶಾರದಾ ಪೀಠದ ಆದಾಯವು ಅಧಿಕವಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಮಠದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.