ADVERTISEMENT

ನರಸಿಂಹರಾಜಪುರ: ಕುಂಟುತ್ತಾ ಸಾಗಿದ ಸೋಲಾರ್ ಟೆಂಟಕಲ್ ಬೇಲಿ ಕಾಮಗಾರಿ

ಕೆ.ವಿ.ನಾಗರಾಜ್
Published 17 ಫೆಬ್ರುವರಿ 2026, 3:20 IST
Last Updated 17 ಫೆಬ್ರುವರಿ 2026, 3:20 IST
ನರಸಿಂಹರಾಜಪುರ ತಾಲ್ಲೂಕು ರಾವೂರು, ಲಿಂಗಾಪುರ ಗ್ರಾಮದ ವ್ಯಾಪ್ತಿಯಲ್ಲಿ ಸೋಲಾರ್ ಟೆಂಟಕಲ್ ಬೇಲಿ ನಿರ್ಮಾಣಕ್ಕೆ ಜಾಗ ಸ್ವಚ್ಛಗೊಳಿಸಿರುವುದು
ನರಸಿಂಹರಾಜಪುರ ತಾಲ್ಲೂಕು ರಾವೂರು, ಲಿಂಗಾಪುರ ಗ್ರಾಮದ ವ್ಯಾಪ್ತಿಯಲ್ಲಿ ಸೋಲಾರ್ ಟೆಂಟಕಲ್ ಬೇಲಿ ನಿರ್ಮಾಣಕ್ಕೆ ಜಾಗ ಸ್ವಚ್ಛಗೊಳಿಸಿರುವುದು   

ನರಸಿಂಹರಾಜಪುರ: ತಾಲ್ಲೂಕಿನಲ್ಲಿ ಕಾಡಾನೆಗಳ ಉಪಟಳ ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಅನುದಾನ ಬಿಡುಗಡೆ ಮಾಡಿ ಸೋಲಾರ್ ಟೆಂಟಕಲ್ ಬೇಲಿ ನಿರ್ಮಾಣಕ್ಕೆ ಮುಂದಾದರೂ, ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಕಾಡಂಚಿನ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ. ಇದೇ ವೇಳೆ ಭದ್ರಾ ಹಿನ್ನೀರು ಕಡಿಮೆಯಾಗುತ್ತಿರುವುದು ಗ್ರಾಮಸ್ಥರನ್ನು ಮತ್ತಷ್ಟು ಆತಂಕಗೊಳಿಸಿದೆ.

ಕಳೆದ ಕೆಲವು ತಿಂಗಳಿನಿಂದ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿ, ಬೆಳೆ ಹಾನಿಯೊಂದಿಗೆ ಜೀವ ಹಾನಿಯ ಘಟನೆಗಳೂ ಸಂಭವಿಸಿದ್ದವು. ಈ ಹಿನ್ನೆಲೆಯಲ್ಲಿ ನರಸಿಂಹರಾಜಪುರ ವಲಯ ಅರಣ್ಯ ವ್ಯಾಪ್ತಿಯಲ್ಲಿ 2025–26ನೇ ಸಾಲಿಗೆ ₹1.12 ಕೋಟಿ ಅನುದಾನ ಬಿಡುಗಡೆ ಮಾಡಿ ಸೋಲಾರ್ ಟೆಂಟಕಲ್ ಬೇಲಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಲಿಂಗಾಪುರ ಗ್ರಾಮದ ಚಂದ್ರಪ್ಪ ಅವರ ತೋಟದಿಂದ ಹೂವಣ್ಣಗೌಡ ಅವರ ತೋಟದವರೆಗೆ 2,800 ಮೀಟರ್, ಹಳೇದಾನಿವಾಸ ಗ್ರಾಮದ ಚುಂಚನಮನೆ ಬ್ಲಾಕ್ ವ್ಯಾಪ್ತಿಯಲ್ಲಿ 1,350 ಮೀಟರ್, ದಾನಿವಾಸ ಗ್ರಾಮದ ಮುದುಕೂರಿನ ಅಮ್ಜದ್ ಅವರ ತೋಟದಿಂದ ವಿಠಲ ಗ್ರಾಮದ ಮಧು ಅವರ ತೋಟದವರೆಗೆ 4 ಕಿ.ಮೀ., ವಿಠಲ ಗ್ರಾಮದ ಕೆಸವೆ ಕೋಗುವಿನಿಂದ ಆನೆ ಕೋಗುವರೆಗೆ 5,058 ಮೀಟರ್ ಹಾಗೂ ಚಿಕ್ಕಗ್ರಹಾರ ವಲಯ ಅರಣ್ಯ ವ್ಯಾಪ್ತಿಯ ಹಂಚಿನಕೊಡಿಗೆಯಿಂದ ತಮ್ಮಯ್ಯನ ತೋಟದವರೆಗೆ 745 ಮೀಟರ್ ಉದ್ದದ ಬೇಲಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಪ್ರತಿ ಕಿಲೋಮೀಟರ್‌ಗೆ ₹7,17,426 ಅನುದಾನ ಮೀಸಲಿಡಲಾಗಿದೆ.

ADVERTISEMENT

ಪ್ರಸ್ತುತ ಭದ್ರಾಹಿನ್ನೀರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾವೂರು, ಲಿಂಗಾಪುರ, ಸೂಸಲವಾನಿ ಸೇರಿದಂತೆ ಹಲವಾರು ಗ್ರಾಮಗಳ ತೋಟಗಳಿಗೆ ಕಾಡಾನೆಗಳು ನುಗ್ಗುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕ ರೈತರು ವ್ಯಕ್ತಪಡಿಸಿದ್ದಾರೆ.

‘ಕಾಡಾನೆಗಳ ಉಪಟಳ ತಡೆಯಲು ಗ್ರಾಮದಂಚಿನಲ್ಲಿ ಜಾಗವನ್ನು ಅರಣ್ಯ ಇಲಾಖೆ ಸ್ವಚ್ಛಗೊಳಿಸಿದೆ. ಆದರೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಈಗಾಗಲೇ ಮೂರ್ನಾಲ್ಕು ಕಾಡಾನೆಗಳು ಕಾಡಂಚಿನಲ್ಲೇ ಬೀಡುಬಿಟ್ಟಿವೆ. ತೋಟಗಳನ್ನು ರಕ್ಷಿಸಿಕೊಳ್ಳುವುದು ಸವಾಲಾಗಿದೆ. ಶೀಘ್ರದಲ್ಲಿ ಬೇಲಿ ಕಾಮಗಾರಿ ಪೂರ್ಣಗೊಳ್ಳಬೇಕು’ ಎಂದು ಗ್ರಾಮಸ್ಥ ರಾಜೇಶ್ ಆಗ್ರಹಿಸಿದರು.

ಸೋಲಾರ್ ಟೆಂಟಕಲ್ ಬೇಲಿ ನಿರ್ಮಾಣಕ್ಕೆ ಸಾಮಗ್ರಿ ತಂದಿಟ್ಟಿರುವುದು

ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಪ್ರತಿಕ್ರಿಯಿಸಿ, ‘ಟೆಂಟಕಲ್ ಬೇಲಿ ನಿರ್ಮಾಣಕ್ಕಾಗಿ ಜಾಗವನ್ನು ಸ್ವಚ್ಛಗೊಳಿಸಲಾಗಿದೆ. ವಿವಿಧ ಭಾಗಗಳಿಗೆ ಬೇರೆ ಬೇರೆ ಗುತ್ತಿಗೆದಾರರನ್ನು ನಿಯೋಜಿಸಲಾಗಿದೆ. ಕೆಲವರು ಪರಿಕರಗಳನ್ನು ತಂದು ಕಾಮಗಾರಿ ಆರಂಭಿಸಿದ್ದಾರೆ. ಗುತ್ತಿಗೆದಾರರಿಗೆ ಆರು ತಿಂಗಳ ಅವಧಿ ನೀಡಲಾಗಿದೆ. ಮಾರ್ಚ್ ಅಂತ್ಯದೊಳಗೆ ಶೇಕಡ 60ರಷ್ಟು ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮುದುಕೂರು ಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೇ ಕೆಲಸ ಆರಂಭವಾಗಿದೆ. ಗ್ರಾಮಗಳತ್ತ ಬರುವ ಕಾಡಾನೆಗಳನ್ನು ಓಡಿಸುವ ಕಾರ್ಯವೂ ಸಿಬ್ಬಂದಿಯಿಂದ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.