ADVERTISEMENT

ಬಿಜೆಪಿ ಸೇರ್ಪಡೆಗೆ ಕಾಂಗ್ರೆಸ್‌ನ ಕೆಲ ಶಾಸಕರ ಇಂಗಿತ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 13:59 IST
Last Updated 11 ನವೆಂಬರ್ 2019, 13:59 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಕಾಂಗ್ರೆಸ್‌ನ ಇನ್ನಷ್ಟು ಶಾಸಕರು ಬಿಜೆಪಿ ಸೇರುವ ಆಶಯ ವ್ಯಕ್ತಪಡಿಸಿದ್ದಾರೆ. ಉಪಚುನಾವಣೆಗೂ ಮುಂಚೆ ಕಾಂಗ್ರೆಸ್‌ ಮತ್ತೊಂದು ಹೋಳಾಗಿ ವಿಭಜನೆಯಾದರೆ ಆಶ್ಚರ್ಯಪಡಬೇಕಿಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಮಾರ್ಮಿಕವಾಗಿ ನುಡಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇದು ಉಪಚುನಾವಣೆಗೂ ಮುಂಚೆ ಅಥವಾ ನಂತರ ಆಗಬಹುದು. ಯಾರ್ಯಾರು ಬರುತ್ತಾರೆ ಎಂಬುದನ್ನು ಈ ಸಂದರ್ಭದಲ್ಲಿ ಹೇಳಲಾಗದು. ಇದೆಲ್ಲ ಕದ್ದುಮುಚ್ಚಿ ನಡೆಯುವ ಕೆಲಸವಲ್ಲ, ಶೀಘ್ರದಲ್ಲಿ ಗೊತ್ತಾಗುತ್ತದೆ’ ಎಂದು ಉತ್ತರಿಸಿದರು.

‘ಕಾಂಗ್ರೆಸ್‌ನಲ್ಲಿ ಭವಿಷ್ಯ ಇಲ್ಲ ಎಂದು ಬಿಜೆಪಿ ಕಡೆ ಮುಖಮಾಡಿರುವುದಾಗಿ ಆ ಶಾಸಕರು ಹೇಳಿಕೊಂಡಿದ್ದಾರೆ. ಅಲ್ಪಸಂಖ್ಯಾತರ ಒಲೈಕೆ, ವಿಭಜಿಸಿ ಆಳುವಂಥ ಕಾಂಗ್ರೆಸ್‌ನ ಸವಕಲು ನೀತಿಗಳನ್ನು ನೋಡಿ ಬೇಜಾರಾಗಿ ಈ ಆಶಯ ವ್ಯಕ್ತಪಡಿದ್ದಾರೆ. ಹಳೆಯ ಮೈಸೂರು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ ಕಡೆಗಳವರೂ ಬರುತ್ತಾರೆ’ ಎಂದರು.

ADVERTISEMENT

‘ಕಾಂಗ್ರೆಸ್‌ ಶಾಸಕರ ಸೇರ್ಪಡೆಯಿಂದ ಬಿಜೆಪಿಯಲ್ಲಿ ತಿಕ್ಕಾಟ ಉದ್ಭವಿಸಲ್ಲ ಅನುಸರಿಸಿಕೊಂಡು ಹೋಗಬೇಕಾಗುತ್ತದೆ ಅಷ್ಟೆ. ಸಾಮರ್ಥ್ಯದ ಅನಿವಾರ್ಯ ಇದ್ದಾಗ ಒಳ್ಳೆಯ ಉದ್ದೇಶಕ್ಕೆ ಎಲ್ಲರನ್ನೂ ಸೇರಿಸಿಕೊಳ್ಳಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್‌ ಪಕ್ಷದಲ್ಲಿನ ಸಂಘರ್ಷ ಬಹಿರಂಗ ರೂಪ ಪಡೆದುಕೊಂಡಿದೆ ಎಂಬುದು ಗೊತ್ತಿರುವ ಸಂಗತಿ. ಅದನ್ನು ಮುಚ್ಚಿಹಾಕಿಕೊಳ್ಳಲು ಬಿಜೆಪಿ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ಮಕಾಡೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆಮಾತು ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಅವರಿಗೆ ಅನ್ವಯಿಸುತ್ತದೆ. ನಾಟಕಗಳಲ್ಲಿ ಅಬ್ಬರಿಸುವಂತೆ ಅಬ್ಬರಿಸುತ್ತಾರೆ ಅಷ್ಟೆ’ ಎಂದು ಕಟಕಿಯಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.