ADVERTISEMENT

20 ಸಾವಿರ ಹೆಕ್ಟೇರ್‌ನಲ್ಲಿ ರೋಗಬಾಧೆ:ಕೃಷಿ ವಿಜ್ಞಾನಿ ಡಾ.ಗಿರೀಶ್

ಎಲೆಚುಕ್ಕಿ ರೋಗದ ಮಾಹಿತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 5:02 IST
Last Updated 6 ನವೆಂಬರ್ 2022, 5:02 IST
ಶೃಂಗೇರಿಯ ಜಿ.ಎಸ್.ಬಿ ಸಭಾಂಗಣದಲ್ಲಿ ಪೀಕಾರ್ಡ್ ಬ್ಯಾಂಕ್, ಮ್ಯಾಮ್ಕೋಸ್, ತಾಲ್ಲೂಕು ಕೃಷಿ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆದ ಎಲೆ ಚುಕ್ಕಿ ರೋಗದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಶಾಸಕ ಟಿ.ಡಿ ರಾಜೇಗೌಡ ಉದ್ಘಾಟಿಸಿದರು.
ಶೃಂಗೇರಿಯ ಜಿ.ಎಸ್.ಬಿ ಸಭಾಂಗಣದಲ್ಲಿ ಪೀಕಾರ್ಡ್ ಬ್ಯಾಂಕ್, ಮ್ಯಾಮ್ಕೋಸ್, ತಾಲ್ಲೂಕು ಕೃಷಿ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆದ ಎಲೆ ಚುಕ್ಕಿ ರೋಗದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಶಾಸಕ ಟಿ.ಡಿ ರಾಜೇಗೌಡ ಉದ್ಘಾಟಿಸಿದರು.   

ಶೃಂಗೇರಿ: ‘ಅತಿಯಾದ ಮಳೆ ಹಾಗೂ ತೇವಾಂಶದಿಂದ ಜಿಲ್ಲೆಯ 20 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ತೋಟಗಳಿಗೆಎಲೆಚುಕ್ಕಿ ರೋಗ ವ್ಯಾಪಿಸಿದೆ. ಅಕ್ಕ ಪಕ್ಕದ ತೋಟಗಳಿಗೆ ಶೀಘ್ರವಾಗಿ ಗಾಳಿಯಿಂದ, ಮಳೆಯಿಂದ ರೋಗ ಹರಡುತ್ತದೆ’ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಗಿರೀಶ್ ಹೇಳಿದರು.

ಶೃಂಗೇರಿಯ ಜಿ.ಎಸ್.ಬಿ ಸಭಾಂಗಣ ದಲ್ಲಿ ಪಿಕಾರ್ಡ್ ಬ್ಯಾಂಕ್, ಮ್ಯಾಮ್ಕೋಸ್, ತಾಲ್ಲೂಕು ಕೃಷಿ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆದ ಎಲೆಚುಕ್ಕಿ ರೋಗದ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

‘ರೋಗ ಹರಡಿಸುವ ಜೀವಾಣು 3 ವರ್ಷಗಳ ಕಾಲ ಭೂಮಿಯಲ್ಲಿ ಉಳಿದುಕೊಂಡಿರುತ್ತದೆ. ಹಾಗಾಗಿ, ರೋಗ ತಗಲಿದ ಅಡಿಕೆ ಗರಿಗಳನ್ನು ಕತ್ತರಿಸಿ ಸುಡಬೇಕು. ಭತ್ತದ ಗದ್ದೆಗಳನ್ನು ಅಡಿಕೆ ತೋಟವಾಗಿ ಪರಿವರ್ತಿಸಿದ ಜಾಗದಲ್ಲಿ ಹೆಚ್ಚಾಗಿ ಈ ರೋಗ ಕಾಣಿಸಿಕೊಂಡಿದೆ. ಸಾಫ್ ಅಥವಾ ಹೆಕ್ಸೋಜೋನಲ್ ರಾಸಾಯನಿಕ ಔಷಧಿಯನ್ನು ಸಿಂಪಡಿಸಬೇಕು. ಆಗ ರೋಗವನ್ನು ನಿಯಂತ್ರಿಸಲು ಸಾಧ್ಯ’ ಎಂದು ಹೇಳಿದರು.

ADVERTISEMENT

ಮುಖ್ಯಮಂತ್ರಿ ರಾಜಕೀಯ ಮುಖ್ಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಮಾತನಾಡಿ, ‘ರೈತರಿಗೆ ಅಡಿಕೆ ಬೆಳೆ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಅಡಿಕೆ ಹಳದಿ ರೋಗ ಹಾಗೂ ಎಲೆಚುಕ್ಕಿ ರೋಗಕ್ಕೆ ವಿಜ್ಞಾನಿಗಳು ಕೂಡಲೇ ಔಷಧಿ ಕಂಡು ಹಿಡಿಯಬೇಕು. ಸಂಕಷ್ಟ ಕಾಲದಲ್ಲಿ ಸರ್ಕಾರವು ಕೃಷಿಕರ ನೆರವಿಗೆ ಬರಬೇಕು’ ಎಂದರು.

ಬೆಂಗಳೂರಿನ ಸಿ.ಐ.ಐ.ಆರ್.ಸಿ ಸಂಸ್ಥೆಯ ವಿಜ್ಞಾನಿ ಡಾ.ಶ್ವೇತಾ ಮಾತನಾಡಿ, ‘ಅಡಿಕೆ ಮರಕ್ಕೆ ತಗಲುವ ಯಾವುದೇ ರೋಗಕ್ಕೆ ಬೇರಿನ ಮುಖಾಂತರ ಔಷಧಿ ನೀಡುವುದು ಉಪಯುಕ್ತ. ಶಾರದಾ ಮಠ ಸೇರಿದಂತೆ ಒಟ್ಟು 3 ತೋಟಗಳಲ್ಲಿ ಈ ಪ್ರಯೋಗ ನಡೆಸಲಾಗಿದ್ದು, ರೋಗ ಹತೋಟಿಗೆ ಬರುವ ಲಕ್ಷಣ ಕಾಣುತ್ತಿದೆ’ ಎಂದರು.

ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ವೇದಮೂರ್ತಿ ಮಾತನಾಡಿ, ‘ಜಿಲ್ಲೆಯಲ್ಲಿ ಸುಮಾರು 5 ಸಾವಿರ ಲೀಟರ್ ರೋಗ ನಿಯಂತ್ರಣ ಔಷಧಿ ತಂದು ಇಲಾಖೆಯ ಮೂಲಕ ವಿತರಿಸಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ 5 ಆಯ್ದ ತೋಟಗಳನ್ನು ರೋಗದ ನಿಯಂತ್ರಣಕ್ಕಾಗಿ ಪ್ರಯೋಗಾತ್ಮಕವಾಗಿ ಬಳಸಿಕೊಳ್ಳಲಾಗುವುದು’ ಎಂದರು.

ವಿಜ್ಞಾನಿಗಳಾದ ಡಾ.ಕೃಷ್ಣಮೂರ್ತಿ, ಸಿ.ಐ.ಐ.ಆರ್.ಸಿ ನಿರ್ದೇಶಕ ಡಾ.ಕೃಷ್ಣಮೂರ್ತಿ, ತಾಲ್ಲೂಕು ಕೃಷಿ ಸಮಾಜ ಅಧ್ಯಕ್ಷ ಎಂ.ಎಸ್ ರಂಗನಾಥ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎ.ಎಸ್ ನಯನ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಬಿ.ಸಿನರೇಂದ್ರ, ಮ್ಯಾಮ್ಕೋಸ್ ನಿರ್ದೇಶಕರಾದ ಸುರೇಶ್ಚಂದ್ರ, ಟಿ.ಕೆ.ಪರಾಶರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.