ADVERTISEMENT

ಆಸ್ಪತ್ರೆ ಅವ್ಯವಸ್ಥೆ; ಹೋರಾಟ ನಡೆಸಲು ತಯಾರಿ: ಅನಿಲ್ ಹೊಸಕೊಪ್ಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 5:33 IST
Last Updated 7 ಫೆಬ್ರುವರಿ 2026, 5:33 IST
ಮಲೆನಾಡು –ಕರಾವಳಿ ಜನಪರ ಒಕ್ಕೂಟ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಮಾತನಾಡಿದರು
ಮಲೆನಾಡು –ಕರಾವಳಿ ಜನಪರ ಒಕ್ಕೂಟ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಮಾತನಾಡಿದರು   

ಶೃಂಗೇರಿ: ‘ಮಲೆನಾಡಿನಲ್ಲಿ ಹಳ್ಳಿಗಳಿಂದ ತಾಲ್ಲೂಕು ಕೇಂದ್ರಕ್ಕೆ ಬರುವುದೇ ಹರಸಾಹಸ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಮಕ್ಕಳ ವೈದ್ಯರಿಲ್ಲದೆ ಮತ್ತೊಂದು ಊರಿಗೆ ಹೋಗುವಾಗ ಎಷ್ಟೋ ಜೀವಗಳು ಬಲಿಯಾಗಿವೆ’ ಎಂದು ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುವ ಸಮಸ್ಯೆ ಕುರಿತು ಹೋರಾಟ ನಡೆಸಲು ಇಲ್ಲಿನ ಕನ್ನಡ ಭವನದಲ್ಲಿ ಮಲೆನಾಡು ಕರಾವಳಿ ಜನಪರ ಒಕ್ಕೂಟ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನ ಮಹಿಳೆಯರು ಗರ್ಭಿಣಿಯಾದ ದಿನದಿಂದ ಹೆರಿಗೆಯಾಗುವ ತನಕ ಪ್ರಸೂತಿ ತಜ್ಞರ ಸಂಪರ್ಕದಲ್ಲಿ ಇದ್ದು ಚಿಕಿತ್ಸೆ ಪಡೆದುಕೊಳ್ಳಬೇಕು. ಆದರೆ, ಶೃಂಗೇರಿ ಆಸ್ಪತ್ರೆಯಲ್ಲಿ ಹೆರಿಗೆ ವೈದ್ಯರೇ ಇಲ್ಲ. ಜತೆಗೆ ಮಕ್ಕಳ ವೈದ್ಯರು, ಜನರಲ್ ಸರ್ಜನ್, ಸ್ತ್ರೀರೋಗ ಮಹಿಳಾ ತಜ್ಞರು, ನೇತ್ರ ತಜ್ಞರು, ಕೀಲು ಮೂಳೆ ತಜ್ಞರು, ಕಿವಿ-ಮೂಗು-ಗಂಟಲು ತಜ್ಞರು, ಚರ್ಮರೋಗ ತಜ್ಞರು, ರೇಡಿಯೋಲಜಿ ತಜ್ಞರು ಇಲ್ಲ ಎಂದು ಆರೋಗ್ಯ ಸಚಿವರಿಗೂ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಿ’ ಎಂದು ಒತ್ತಾಯಿಸಿದರು.

ADVERTISEMENT

ಒಕ್ಕೂಟದ ಸದಸ್ಯ ಜಗದೀಶ್ ಕಣದಮನೆ ಮಾತನಾಡಿ, ‘ಗ್ರಾಮ ನೈರ್ಮಲ್ಯ ಸಮಿತಿಯ ಸದಸ್ಯರಿಗೆ ಆ ವ್ಯಾಪ್ತಿಯ ಸಾರ್ವಜನಿಕರ ಕೆಲಸದ ಉದ್ದೇಶಕ್ಕೆ ವರ್ಷಕ್ಕೆ 10 ಸಾವಿರದ ತನಕ ಸರ್ಕಾರದಿಂದ ಅನುದಾನ ಬರುತ್ತದೆ. ಪ್ರಸ್ತುತ 2 ವರ್ಷಗಳಿಂದ ಸದಸ್ಯರಿಗೆ ಈ ಆಸ್ಪತ್ರೆ ವೈದ್ಯಾಧಿಕಾರಿ ಅನುದಾನ ನೀಡುತ್ತಿಲ್ಲ’ ಎಂದರು.

‘ಈ ಬಗ್ಗೆ ವಿಚಾರಿಸಿದರೆ ಅನುದಾನ ರಾತ್ರಿ ಬರುತ್ತೆ ಬೆಳಿಗ್ಗೆ ವಾಪಸ್ಸು ಹೋಗುತ್ತದೆ ಎನ್ನುವ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಈ ಅನುದಾನ ವೈದ್ಯಾಧಿಕಾರಿಗಳ ಖಾತೆಗೆ ಬರುತ್ತಿದ್ದು, ಇದಕ್ಕೆ ಸರಿಯಾದ ಉತ್ತರ ನೀಡಬೇಕು. ಅನುದಾನ ಬಾರದೆ ಗ್ರಾಮೀಣ ನೈರ್ಮಲ್ಯ ಸಮಿತಿ ಸಭೆ ಸಹ ನಡೆಯುತ್ತಿಲ್ಲ. ಸಮಿತಿ ಸದಸ್ಯರ ಸಭೆಗೂ ಸಹ ಹಾಜರಾಗದ ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಭೆಯಲ್ಲಿ ಒಕ್ಕೂಟದ ವಿಟ್ಲಾಪುರ ಸುಬ್ರಹ್ಮಣ್ಯ ಅಚಾರ್, ಮುರುಳೀಧರ್ ಪೈ, ಆದೇಶ ಕೂಡ್ಲುಮಕ್ಕಿ, ಉಮೇಶ್ ಹಿಂಡ್ರೋಳ್ಳಿ, ಗುತ್ತಳಿಕೆ ಕೇಶವ, ಪ್ರದೀಪ್ ಯಡದಾಳು, ಮಧುಕರ್ ಕಣದಮನೆ, ಶಿವಕುಮಾರ್ ಹೊಸಕೊಪ್ಪ, ರತ್ನಾಕರ್ ಸಂಪೇಕೊಳಲು, ಕೆ.ಟಿ. ಮಂಜುನಾಥ್ ಇದ್ದರು.

ಅಹೋರಾತ್ರಿ ಸತ್ಯಾಗ್ರಹದ ಎಚ್ಚರಿಕೆ

‘ಈ ಹಿಂದೆ ಆಸ್ಪತ್ರೆಯಲ್ಲಿದ್ದ 3 ಜನ ಉತ್ತಮ ವೈದ್ಯರನ್ನ ವೈದ್ಯಾಧಿಕಾರಿಗಳು ಕಿರುಕುಳ ನೀಡಿ ಓಡಿಸಿದ್ದಾರೆ ಎಂಬ ಆರೋಪ ಸಹ ಇದೆ’ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸಬೇಕು. ಇಲ್ಲಾದಿದ್ದರೆ ಅಹೋರಾತ್ರಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.