ಮೂಡಿಗೆರೆ: ನ್ಯಾಯಾಂಗಕ್ಕೆ ಗೌರವ ನೀಡದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶುಕ್ರವಾರ ಪ್ರಗತಿಪರ ಸಂಘಟನೆಗಳಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿ.ಬಿ.ನಿಂಗಯ್ಯ, ‘ದೇಶದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಈ 4 ಅಂಗಗಳಿಗೆ ಧಕ್ಕೆ ಉಂಟಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತದೆ. ವಕೀಲ ರಾಕೇಶ್ ಸಂವಿಧಾನ ವಿರೋಧಿಯಾಗಿದ್ದರಿಂದ, ನ್ಯಾಯಾಂಗ ವ್ಯವಸ್ಥೆಗೆ ಗೌರವ ಕೊಡದೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದಾರೆ. ಈ ವ್ಯಕ್ತಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷದ ಮುಖಂಡ ಬಿ.ಕೆ.ಲಕ್ಷ್ಮಣಕುಮಾರ್ ಮಾತನಾಡಿ, ‘ವಕೀಲ ರಾಕೇಶ್ ವಿರುದ್ಧ ಇದೂವರೆಗೂ ಯಾವುದೇ ಕ್ರಮ ವಹಿಸದಿರುವುದು ಕೇಂದ್ರ ಸರ್ಕಾರದ ವೈಫಲ್ಯವಾಗಿದೆ. ಕೂಡಲೇ ಆತನನ್ನು ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಚ್.ಜಿ. ಸುರೇಂದ್ರ, ಬಿಎಸ್ಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಬಿ. ರಮೇಶ್, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ಕಾಂಗ್ರೆಸ್ ಜಿಲ್ಲಾ ವಕ್ತಾರ ಎಂ.ಎಸ್.ಅನಂತ್, ಮುಖಂಡರಾದ ಬಿ.ಎಸ್. ಜಯರಾಂಗೌಡ, ಎಚ್.ವಿ. ಮಹೇಂದ್ರ ಮೌರ್ಯ, ಯು.ಬಿ. ಮಂಜಯ್ಯ, ಶಂಕರ್ ಬೆಟ್ಟಗೆರೆ, ಪಿ.ಕೆ. ಮುಂಜುನಾಥ್, ಹಾಲಯ್ಯ, ಹರೀಶ್ ಸಬ್ಬೇನಹಳ್ಳಿ, ಹರೀಶ್ ನಲ್ಕೆ, ಸಿ.ಕೆ. ಇಬ್ರಾಹಿಂ, ಎ.ಸಿ. ಅಯೂಬ್ಹಾಜಿ, ಜಗದೀಶ್ ಫಲ್ಗುಣಿ, ಎಂ.ಎನ್. ಅಶ್ವಥ್, ಜಯಮ್ಮ, ಆಶಾ, ಜಯಲಕ್ಷ್ಮಿ, ದೇವರಾಜ್ ಸಬ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.