
ಚಿಕ್ಕಮಗಳೂರು: ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೋಲು-ಗೆಲುವು ಸಹಜ. ವಿದ್ಯಾರ್ಥಿಗಳು ಧೃತಿಗೆಡದೇ ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು. ಮುಂದಿನ ಯತ್ನಕ್ಕೆ ಕಟಿಬದ್ಧರಾಗಬೇಕು ಎಂದು ಮಂಡ್ಯ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಸಿ.ಕೆ.ಸುಬ್ಬರಾಯ ಹೇಳಿದರು.
ನಗರದ ಎಐಟಿ ಕಾಲೇಜಿನಲ್ಲಿ ಶನಿವಾರ ನಡೆದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ಸಾಂಸ್ಕೃತಿಕ ಹಬ್ಬದ ಚುಂಚನ–2025 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ಪರ್ಧೆಗಳು ಸ್ನೇಹ ಮನೋಭಾವದಿಂದ ಕೂಡಿರಬೇಕು. ವಿಜೇತರು ಉದ್ರೇಕಕ್ಕೆ ಒಳಗಾಗದೇ ಸಮಾಧಾನ ವಹಿಸಬೇಕು. ಸೋತವರು ದ್ವೇಷಕ್ಕೆ ಎಡೆಮಾಡಿಕೊಡದೇ ಸ್ನೇಹತ್ವವನ್ನು ಹೊಂದಬೇಕು. ಸ್ಪರ್ಧೆಗಳು ಗೆಲುವಿಗಿಂತ, ಭಾಗವಹಿಸಿದ ಅನುಭವವನ್ನೇ ದೊಡ್ಡಗೆಲುವೆಂದು ಭಾವಿಸಬೇಕು ಎಂದು ತಿಳಿಸಿದರು.
ಅಂತಿಮ ವರ್ಷದ ಪರೀಕ್ಷೆಗಳನ್ನು ಎದುರಿಸಲು ಕಠಿಣ ಅಭ್ಯಾಸವಿರಬೇಕು. ಆ ನಿಟ್ಟಿನಲ್ಲಿ ಯುವಕ-ಯುವತಿಯರು ಓದಿನ ಕಡೆ ಗಮನಹರಿಸಬೇಕು ಎಂದರು.
ಐಎಎಸ್-ಕೆಎಎಸ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಂಸ್ಥೆ ನಿರ್ದೇಶಕ ಜಿ.ತುಳಸಿದಾಸ್ ಮಾತನಾಡಿ, ಐಎಎಸ್, ಕೆಎಎಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳನ್ನು ಎದುರಿಸಲು ಈ ವಯಸ್ಸಿನಿಂದಲೇ ವಿದ್ಯಾರ್ಥಿಗಳು ನಿರ್ಣಯ ಕೈಗೊಳ್ಳಬೇಕು. ಅದಕ್ಕೆ ತಕ್ಕ ಅಭ್ಯಾಸ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಎಐಟಿ ಕಾಲೇಜು ಪ್ರಾಂಶುಪಾಲ ಸಿ.ಟಿ.ಜಯದೇವ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಐಟಿ ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಸಂಘದ ಸಂಗಾರೆಡ್ಡಿ, ಮೆಕ್ಯಾನಿಕಲ್ ವಿಭಾಗದ ಜಿ.ಎಂ.ಸತ್ಯನಾರಾಯಣ್, ಮಾಹಿತಿ ತಂತ್ರಜ್ಞಾನದ ಮುಖ್ಯಸ್ಥ ಸಂಪತ್, ಎನ್.ಡಿ.ದಿನೇಶ್, ಜಿ.ಆರ್.ವೀರೇಂದ್ರ, ಗೌತಮ್, ಪುಷ್ಪ, ಕಿರಣ್, ಮಲ್ಲಿಕಾರ್ಜುನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.