ತರೀಕೆರೆ: ರಸ್ತೆಯ ಬದಿಯಲ್ಲಿದ್ದ ಅಂಗಡಿಗಳ ಧ್ವಂಸ, ಅಮೂಲ್ಯ ವಸ್ತುಗಳ ನಾಶ ಹಾಗೂ ಬಡ ಕುಟುಂಬಗಳ ಮೇಲೆ ಪುರಸಭೆ ಮುಖ್ಯ ಅಧಿಕಾರಿಗಳು ದಬ್ಬಾಳಿಕೆ, ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ತಾಲ್ಲೂಕು ಘಟಕ, ಕನ್ನಡ ಸೇನೆ ಕರ್ನಾಟಕ ತಾಲ್ಲೂಕು ಘಟಕ, ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಉಪ ವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
‘ನಾನು ಮತ್ತು ನನ್ನೊಂದಿಗಿರುವ ಏಳು ಬಡ ಕುಟುಂಬಗಳ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಕುಟುಂಬ ನಿರ್ವಹಣೆಗಾಗಿ ತಾತ್ಕಾಲಿಕ ಶೀಟ್ಗಳಲ್ಲಿ ಜೆರಾಕ್ಸ್ ಅಂಗಡಿ, ಟೀ ಅಂಗಡಿ, ಹೇರ್ ಸಲೂನ್ ಇಟ್ಟುಕೊಂಡಿದ್ದೇವೆ. ಕುಟುಂಬ ನಿರ್ವಹಣೆಗೆ ಇದೊಂದೇ ಮಾರ್ಗ’ ಎಂದು ಅವರು ಪತ್ರದಲ್ಲಿ ಅಲವತ್ತುಕೊಂಡಿವೆ.
‘ಅಂಗಡಿಯಲ್ಲಿ ದೇವರ ಪೂಜೆ ಮಾಡುತ್ತಿದ್ದಾಗ ಪುರಸಭೆ ಮುಖ್ಯಾಧಿಕಾರಿ, ಸಿಬ್ಬಂದಿ ಜೆಸಿಬಿ ಯಂತ್ರದೊಂದಿಗೆ ಬಂದು ನಮ್ಮ ಅಂಗಡಿಯನ್ನು ಧ್ವಂಸ ಮಾಡಿದ್ದಾರೆ. ಕಷ್ಟಪಟ್ಟು ಖರೀದಿಸಿದ್ದ ಅಮೂಲ್ಯ ವಸ್ತುಗಳನ್ನು ನಮ್ಮ ಗಮನಕ್ಕೆ ತಾರದೆ ಧ್ವಂಸ ಮಾಡಿ ನಷ್ಟ ಪಡಿಸಿದ್ದಾರೆ. ನಾವು ಆದಾಯವಿಲ್ಲದೆ ನಿರಾಶ್ರಿತರಾಗಿದ್ದೇವೆ. ಈ ಜಾಗ ಪುರಸಭೆಗೆ ಸೇರಿಲ್ಲ. ಅವರು ನಡೆಸಿರುವ ಕಾರ್ಯಾಚರಣೆ ಅಕ್ರಮ. ಅಧಿಕಾರಿ, ಸಿಬ್ಬಂದಿ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಅಂಗಡಿಯಲ್ಲಿ ಧ್ವಂಸವಾದ ಅಮೂಲ್ಯ ವಸ್ತುಗಳಿಗೆ ಹಾಗೂ ಜೀವನೋಪಾಯ ನಷ್ಟಕ್ಕೆ ಪರಿಹಾರ ನೀಡಬೇಕು. ಬಡ ಕುಟುಂಬಗಳು ಸಣ್ಣ ವ್ಯಾಪಾರ ಮುಂದುವರಿಸಲು ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರವೇ ರಾಜ್ಯ ಸಂಚಾಲಕ ಜಿ.ಆರ್.ವಿಶ್ವನಾಥ್ ಕಾಶಿ, ಕನ್ನಡ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ವಿಕಾಸ್, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್, ಗಿರೀಶ್ ಹಾಲುಕಂಬಿ, ಸಂತೋಷ್, ಶಿವಣ್ಣ, ಗಿರೀಶ್, ಮಂಜುನಾಥ್, ಜಯಂತ್, ಧರ್ಮರಾಜ್, ಶಿವು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.