
ಮೂಡಿಗೆರೆ: ತಾಲ್ಲೂಕಿನ ನಂದೀಪುರ ಗ್ರಾಮದ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಕಾರು ಮುಗುಚಿ ನದಿಗೆ ಬಿದ್ದಿದ್ದು ಹಲವರಿಗೆ ಗಾಯಗಳಾಗಿವೆ.
ಕಾರು ಹಾಸನದಿಂದ ಮಂಗಳೂರಿಗೆ ಹೋಗುತ್ತಿತ್ತು. ಮೂಡಿಗೆರೆ - ಗೆಂಡೇಹಳ್ಳಿ ರಸ್ತೆಯ ಕನ್ನಾಪುರ ಸಮೀಪದ ಬೊಮ್ಮೇನಹಳ್ಳಿಯಲ್ಲಿ ಸೇತುವೆ ಬಳಿ ಎದುರಿನಿಂದ ಬಂದ ಲಾರಿಗೆ ದಾರಿ ಬಿಟ್ಟುಕೊಡಲು ಹೋಗಿ ಸೇತುವೆ ಮೇಲಿಂದ ಕಾರು ಕಳಕ್ಕೆ ಉರುಳಿದೆ. ಗಾಯಾಳುಗಳಿಗೆ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ.
‘ಬೊಮ್ಮೇನಹಳ್ಳಿ ಗ್ರಾಮದಲ್ಲಿರುವ ಸೇತುವೆಗೆ ತಡೆಗೋಡೆ ಇಲ್ಲ, ಸೇತುವೆಯೂ ಕಿರಿದಾಗಿರುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ ಮಾಹಿತಿ ಫಲಕ ಅಳವಡಿಸಿಲ್ಲ. ವಾಹನಗಳು ಕಿರಿದಾದ ಸೇತುವೆಯ ಮೇಲೆ ತೆರಳುವಾಗ ಎದುರಿನಿಂದ ಬರುವ ವಾಹನಗಳಿಗೆ ಜಾಗ ಬಿಡಲಾಗದೇ ಪಲ್ಟಿ ಹೊಡೆಯುತ್ತಿವೆ. ಕೂಡಲೇ ಇಲ್ಲಿ ತಡೆಗೋಡೆ ನಿರ್ಮಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.