ಕಡೂರು: ತಾಲ್ಲೂಕಿನ ಆಣೇಗೆರೆ ಕೆರೆಯಲ್ಲಿ ಮೂವರು ಹುಡುಗರು ನೀರು ಪಾಲಾಗಿದ್ದಾರೆ.
ಬಿಟ್ಟೇನಹಳ್ಳಿಯ ಬಿ.ಬಿ.ದರ್ಶನ್ (16) ಮತ್ತು ಸಹೋದರರಾದ ಬಿ.ಬಿ.ರಾಕೇಶ್.(17), ಬಿ.ಬಿ.ಕಿರಣ್ (20) ಮೃತಪಟ್ಟವರು. ಈಜಲು ಕೆರೆಗೆ ಇಳಿದು ಸಾವಿಗೀಡಾಗಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.ಪಂಚನಹಳ್ಳಿಯ ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿ ಶವಗಳನ್ನು ಇಡಲಾಗಿದೆ.
‘ನೇರಳೆ ಹಣ್ಣು ಕೊಯ್ದುಕೊಂಡು ಬರುತ್ತೇವೆ ಎಂದು ಮನೆಯಲ್ಲಿ ಹೇಳಿ ಮೂವರೂ ಹೋಗಿದ್ದಾರೆ. ಆಣೇಗೆರೆಯ ಕೆರೆಯ ಕೋಡಿ ಬಳಿ ನೀರಿಗೆ ಇಳಿದಿದ್ದಾರೆ.
ಕೆರೆಯಲ್ಲಿ ಹೂಳು ತೆಗೆದಿದ್ದ ಭಾಗದಲ್ಲಿ ಸಿಲುಕಿಕೊಂಡಿದ್ದಾರೆ. ಅಪಾಯದಲ್ಲಿದ್ದ ಯುವಕರನ್ನು ಬಟ್ಟೆ ತೊಳೆಯುತ್ತಿದ್ದ ಮಹಿಳೆಯೊಬ್ಬರು ಸೀರೆ ಎಸೆದು ರಕ್ಷಿಸಲು ಯತ್ನಿಸಿದ್ದಾರೆ. ಆದರೆ, ಅವರಿಂದ ಎಳೆಯಲು ಸಾಧ್ಯವಾಗಿಲ್ಲ’ ಎಂದು ಸ್ಥಳೀಯರು ತಿಳಿಸಿದ್ದಾರೆ.
ದರ್ಶನ್ ಎಸ್ಸೆಸ್ಸೆಲ್ಸಿ, ಕಿರಣ್ ಐಟಿಐ ಮುಗಿಸಿದ್ದರು. ರಾಕೇಶ್ ದ್ವಿತೀಯ ಪಿಯು ವಿದ್ಯಾರ್ಥಿ.ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.