ADVERTISEMENT

ಕೊಪ್ಪಕ್ಕೆ ತುಂಗಾನದಿ, ಹಿರಿಕೆರೆ ಆಸರೆ

ದಿನಪೂರ್ತಿ ನೀರು ಪೂರೈಸುವ ಕೆಸುವಿನ ಕೆರೆ ಯೋಜನೆ ಸಾಕಾರಕ್ಕೆ ಪಟ್ಟಣದ ಜನರ ಕಾತರ

ರವಿಕುಮಾರ್ ಶೆಟ್ಟಿಹಡ್ಲು
Published 26 ಫೆಬ್ರುವರಿ 2023, 9:59 IST
Last Updated 26 ಫೆಬ್ರುವರಿ 2023, 9:59 IST
ಕೊಪ್ಪದ ಹಿರಿಕೆರೆ ಬಳಿಯ ನೀರು ಶುದ್ಧೀಕರಣ ಘಟಕ
ಕೊಪ್ಪದ ಹಿರಿಕೆರೆ ಬಳಿಯ ನೀರು ಶುದ್ಧೀಕರಣ ಘಟಕ   

ಕೊಪ್ಪ: ಪಟ್ಟಣದ ಜನರು ಕುಡಿಯುವ ನೀರಿಗಾಗಿ ಹರಿಹರಪುರದ ಸಮೀಪದ ನಾಗಲಾಪುರದ ಬಳಿ ಹರಿಯುತ್ತಿರುವ ತುಂಗಾನದಿ ಅಥವಾ ಪಟ್ಟಣ ಸಮೀಪದಲ್ಲಿರುವ ಹಿರಿಕೆರೆಯನ್ನು ಆಶ್ರಯಿಸಬೇಕಾಗಿದೆ.

ಬೇಸಿಗೆಯಲ್ಲಿ ನೀರಿನ ಕೊರತೆ ಶಾಶ್ವತವಾಗಿ ಪರಿಹರಿಸಿ, ಪಟ್ಟಣ ನಿವಾಸಿಗಳಿಗೆ ಹಾಗೂ ಗ್ರಾಮಾಂತರ ಪ್ರದೇಶದ ಜನರಿಗೆ ದಿನದ ಇಪ್ಪತ್ತ ನಾಲ್ಕು ತಾಸು ನೀರು ಪೂರೈಸಲು ಕೆಸುವಿನ ಕೆರೆ ಅಭಿವೃದ್ಧಿಯತ್ತ ಪಟ್ಟಣ ಪಂಚಾಯಿತಿ ಈಚೆಗೆ ಗಮನ ಹರಿಸಿದೆ.

ಪಟ್ಟಣದಲ್ಲಿ 11 ವಾರ್ಡ್‌ಗಳಿದ್ದು 1,626 ಮನೆಗಳಿವೆ. 4,993 ಜನ ವಾಸಿಸುತ್ತಿದ್ದಾರೆ. ಒಟ್ಟು 1,546 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಕೆಳಗಿನಪೇಟೆಯಲ್ಲಿ 2 ನೀರಿನ ಟ್ಯಾಂಕ್, ಮೇಲಿನಪೇಟೆಯಲ್ಲಿ 2 ನೀರಿನ ಟ್ಯಾಂಕ್ ಗಳಿದ್ದು ಪ್ರತಿ ಟ್ಯಾಂಕ್ 50 ಸಾವಿರ ಲೀಟರ್ ಸಾಮರ್ಥ್ಯ ಹೊಂದಿವೆ.

ADVERTISEMENT

ತುಂಗಾನದಿ, ಹಿರಿಕೆಯಿಂದ ನೀರನ್ನು ಹಿರಿಕೆರೆ ಸಮೀಪವಿರುವ 1 ಲಕ್ಷ ಗ್ಯಾಲನ್ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕಕ್ಕೆ ಪೂರೈಸಲಾಗುತ್ತದೆ. ಬಳಿಕ ಅದನ್ನು ನಾಲ್ಕು ನೀರಿನ ಟ್ಯಾಂಕ್ ಗಳ ಮೂಲಕ ಪಟ್ಟಣಕ್ಕೆ ಪ್ರತಿದಿನ 2 ಲಕ್ಷ ಲೀಟರ್ ನೀರು ಪೂರೈಸಲಾಗುತ್ತಿದೆ.

ಹೀಗಿದ್ದರೂ ನೀರಿನ ಕೊರತೆ ಬೇಸಿಗೆಯಲ್ಲಿ ಕಂಡು ಬರುವುದು ಸಾಮಾನ್ಯವಾಗಿದೆ. ಇಂದಿರಾನಗರ ಮುಂತಾದ ಕಡೆಗಳಲ್ಲಿ ನೀರನ್ನು ಸಮರ್ಪಕವಾಗಿ ಪೂರೈಸುತ್ತಿಲ್ಲ ಎಂಬ ದೂರು ಇದೆ. ನೀರು ಬಿಡುವ ಸಮಯವೂ ವ್ಯತ್ಯಾಸವಾಗುತ್ತಿರುತ್ತದೆ ಎಂಬ ದೂರು ಇದೆ.

ಕೆಸುವಿನ ಕೆರೆಯಿಂದ ನಿರಂತರ 15 ಇಂಚಿನಷ್ಟು ನೀರು ಹರಿದು ಹೋಗುತ್ತಿದೆ. ನೀರಿನ ಮೂಲ ಸಮರ್ಪಕವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ದಾನಿಗಳ ಮೂಲಕ ಕೆರೆ ಅಭಿವೃದ್ಧಿಗೆ ಮುಂದಾಗಿದೆ. ಕೆರೆ ಒಳಭಾಗದಲ್ಲಿಯೇ ಬಾವಿ ತೋಡುತ್ತಿರುವುದು ನೀರಿನ ಸಮಸ್ಯೆ ಬಗೆಹರಿಸಲಾರದು ಎಂದೂ ಹೇಳಲಾಗುತ್ತಿದೆ. ಕೆರೆ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಬೇಕಿದೆ.

ನಾಗಲಾಪುರದ ತುಂಗಾ ನದಿಯಿಂದ ನೀರು ಪೂರೈಸುವ ಪೈಪ್ ಲೈನ್ ಅನ್ನು ಎಲಿಯಾಸ್ ಡಯಾಸ್ ಅಧ್ಯಕ್ಷರಿದ್ದಾಗ ಮಾಡಲಾಗಿತ್ತು. ಅದು ರಾಷ್ಟ್ರೀಯ ಹೆದ್ದಾರಿ 169ರ ಪಕ್ಕದಲ್ಲಿ ಹಾದು ಬಂದಿದ್ದು, ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುವ ಸಂದರ್ಭ ಆಗಾಗ್ಗೆ ಪೈಪ್ ಒಡೆದು ಹೋಗುತ್ತಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.