ADVERTISEMENT

ಕಳಸ: ಕಾಡಾನೆ ಸೆರೆ, ರಸ್ತೆ ದುರಸ್ತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 6:44 IST
Last Updated 15 ಫೆಬ್ರುವರಿ 2023, 6:44 IST
ಕಳಸದಲ್ಲಿ ತೊಂದರೆ ನೀಡುತ್ತಿರುವ ಆನೆ ಸೆರೆ ಹಿಡಿಯುವಂತೆ ಒತ್ತಾಯಿಸಿ ಜೆಡಿಎಸ್ ಮುಖಂಡರಾದ ನಿಂಗಯ್ಯ, ಮಂಜಪ್ಪಯ್ಯ ಮತ್ತಿತರರು ಕಳಸ ಅರಣ್ಯಾಧಿಕಾರಿ ನಿಶ್ಚಿತ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು
ಕಳಸದಲ್ಲಿ ತೊಂದರೆ ನೀಡುತ್ತಿರುವ ಆನೆ ಸೆರೆ ಹಿಡಿಯುವಂತೆ ಒತ್ತಾಯಿಸಿ ಜೆಡಿಎಸ್ ಮುಖಂಡರಾದ ನಿಂಗಯ್ಯ, ಮಂಜಪ್ಪಯ್ಯ ಮತ್ತಿತರರು ಕಳಸ ಅರಣ್ಯಾಧಿಕಾರಿ ನಿಶ್ಚಿತ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು   

ಕಳಸ: ತಾಲ್ಲೂಕಿನಾದ್ಯಂತ ಕೃಷಿಕರಿಗೆ ತಲೆನೋವಾಗಿರುವ ಎರಡು ಕಾಡಾನೆಗಳ ಸೆರೆಗೆ ಅರಣ್ಯ ಇಲಾಖೆ ತುರ್ತು ಕ್ರಮ ವಹಿಸಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಆಗ್ರಹಿಸಿದರು.

ಈ ಬಗ್ಗೆ ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಆರು ತಿಂಗಳುಗಳಿಂದ ಕಾಡಾನೆಗಳು ಕಳಸ ತಾಲ್ಲೂಕಿನಲ್ಲಿ ಸಂಚರಿಸುತ್ತ ಕೃಷಿ ಭೂಮಿಗೆ ಹಾನಿ ಮಾಡಿವೆ. ಆದರೆ, ಇವುಗಳನ್ನು ಹಿಡಿಯಲು ಇಲಾಖೆ ಯಾಕೆ ಪ್ರಯತ್ನ ನಡೆಸಿಲ್ಲ ಎಂದು ಪ್ರಶ್ನಿಸಿದರು.

ADVERTISEMENT

ಕೃಷಿಕರಿಗೆ ಸಂಕಷ್ಟ ನೀಡುತ್ತಿರುವ ಆನೆಗಳನ್ನು ಎರಡು ವಾರದಲ್ಲಿ ಹಿಡಿಯಬೇಕು. ತಪ್ಪಿದರೆ ಅರಣ್ಯ ಇಲಾಖೆ ವಿರುದ್ಧ ಜೆಡಿಎಸ್ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ಕಳಸ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿ ಎರಡು ವರ್ಷ ಕಳೆದಿದೆ. ಆದರೆ, ನಾಮಕಾವಸ್ಥೆ ತಹಶೀಲ್ದಾರ್ ಹುದ್ದೆಗೆ ನೇಮಕ ಮಾಡಿದ್ದು, ಬಿಟ್ಟರೆ ಬೇರೆ ಯಾವುದೇ ಕೆಲಸ ಆಗಿಲ್ಲ. ಕಳಸದಲ್ಲಿ ಉ‍ಪ ನೋಂದಣಾಧಿಕಾರಿ ಕಚೇರಿ ತೆರೆದಿಲ್ಲ. ಮೂಡಿಗೆರೆಯಲ್ಲೂ ಕಳಸದ ಸ್ವತ್ತುಗಳ ನೋಂದಣಿ ಆಗುತ್ತಿಲ್ಲ. ಇಂತಹ ಸಂಕಷ್ಟ ಇದ್ದರೂ ಶಾಸಕರು ಮತ್ತು ಜಿಲ್ಲಾಡಳಿತ ಮೌನವಾಗಿದ್ದು, ಜನರ ಕಷ್ಟವನ್ನು ದುಪ್ಪಟ್ಟು ಮಾಡುತ್ತಿದ್ದಾರೆ. ಕಳಸ ತಾಲ್ಲೂಕಿನ ರಸ್ತೆಗಳ ದುಃಸ್ಥಿತಿಯು ಡಬಲ್ ಎಂಜಿನ್ ಸರ್ಕಾರದ ಮೌಲ್ಯಮಾಪನ ಮಾಡುತ್ತಿದೆ. ಕಳಸ-ಬಾಳೆಹೊಳೆ, ಕಳಸ-ಕುದುರೆಮುಖ ಇಂತಹ ಪ್ರಮುಖ ರಸ್ತೆಗಳಿಗೆ ಬಂದಿರುವ ಸ್ಥಿತಿ ಆಳುವವರ ವೈಫಲ್ಯ ಎತ್ತಿ ತೋರುತ್ತಿದೆ ಎಂದು ಟೀಕಿಸಿದರು.

ಜೆಡಿಎಸ್ ಮುಖಂಡರಾದ ಮಂಜಪ್ಪಯ್ಯ, ಸಂತೋಷ್, ಜ್ವಾಲನಯ್ಯ, ಆಶಾಲತಾ, ಅರುಣ್, ಭಾಸ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.