ADVERTISEMENT

ನೀರಿನ ಬವಣೆ: ಜನರಿಗೆ ಸಂಕಷ್ಟ

ಚಿಕ್ಕಮಗಳೂರು ನಗರದ ವಿವಿಧೆಡೆ ವಾರದಿಂದ ನೀರು ಪೂರೈಕೆಯಾಗಿಲ್ಲ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 17:08 IST
Last Updated 28 ಏಪ್ರಿಲ್ 2020, 17:08 IST
ಚಿಕ್ಕಮಗಳೂರಿನ ಐ.ಜಿ ರಸ್ತೆಯ ಮನೆಯೊಂದರ ಸಂಪಿಗೆ ಟ್ಯಾಂಕರ್‌ನಿಂದ ನೀರು ತುಂಬಿಸಲಾಯಿತು.
ಚಿಕ್ಕಮಗಳೂರಿನ ಐ.ಜಿ ರಸ್ತೆಯ ಮನೆಯೊಂದರ ಸಂಪಿಗೆ ಟ್ಯಾಂಕರ್‌ನಿಂದ ನೀರು ತುಂಬಿಸಲಾಯಿತು.   

ಚಿಕ್ಕಮಗಳೂರು: ಲಾಕ್‌ಡೌನ್‌ ನಡುವೆ ನಗರದ ಹಲವು ಕಡೆ ನೀರಿನ ಬವಣೆ ತಲೆದೋರಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ.

ಐ.ಜಿ.ರಸ್ತೆ, ನೇಕಾರ ಬೀದಿ, ಹುಣಸೆಮರದ ಬೀದಿ, ಬೆಲ್ಟ್‌ ರಸ್ತೆ ಸಹಿತ ವಿವಿಧೆಡೆಗಳಲ್ಲಿ ನೀರಿಲ್ಲದೆ ಸಮಸ್ಯೆಯಾಗಿದೆ. ವಾರದಿಂದ ನೀರು ಪೂರೈಕೆಯಾಗಿಲ್ಲ.

ಸ್ಥಿತಿವಂತರು ಟ್ಯಾಂಕರ್‌ ವಾಹನಗಳಲ್ಲಿ ನೀರು ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬಡಬಗ್ಗರು ಪರಿತಪಿಸುವಂತಾಗಿದೆ. ನೀರಿಗಾಗಿ ಬೋರ್‌ವೆಲ್‌ಗಳು ಇರುವ ಕಡೆಗೆ ಅಲೆಯುವಂತಾಗಿದೆ.

ADVERTISEMENT

‘ನೀರು ಬಾರದೆ 10 ದಿನವಾಯ್ತು. ಸಮಸ್ಯೆನ್ನು ಸಂಬಂಧಪಟ್ಟವರ ಗಮನಕ್ಕೂ ತಂದಿದ್ದೇವೆ. ಯಾರೊಬ್ಬರೂ ಗಮನ ಹರಿಸುತ್ತಿಲ್ಲ. ನೀರಿನ ತತ್ವಾರ ವಿಪರೀತವಾಗಿದೆ’ ಎಂದು ನೇಕಾರ ಬೀದಿಯ ಕೆ.ಆರ್‌.ವೆಂಕಟೇಶ್‌ ಅಳಲು ತೋಡಿಕೊಂಡರು.

ನೀರಿನ ‘ನಿರಂತರ’ ಸಮಸ್ಯೆ ಬಡಾವಣೆಗಳಾಗಿರುವ ಗೌರಿಕಾಲುವೆ, ಕಲ್ದೊಡ್ಡಿ ಇತರೆಡೆಗಳಿಗೆ 8 ರಿಂದ 10 ದಿನಗಳಿಗೊಮ್ಮೆ ನೀರು. ಈ ಭಾಗಗಳಿಗೆ ಬಹುತೇಕ ಟ್ಯಾಂಕರ್‌ ನೀರೇ ಗತಿ.

ನಗರದ ವಿವಿಧೆಡೆ ಖಾಸಗಿಯವರು ಟ್ರಾಕ್ಟರ್‌ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡುತ್ತಾರೆ. ಒಂದು ಟ್ಯಾಂಕರ್‌ (ಟ್ರ್ಯಾಕ್ಟರ್‌) ನೀರಿಗೆ ₹ 250ರಿಂದ ₹ 300 ದರ ನಿಗದಿಪಡಿಸಿದ್ದಾರೆ. ಮಲ್ಲಂದೂರು, ಹಿರೇಮಗಳೂರು ಇತರೆಡೆ ಪಂಪ್‌ಸೆಟ್‌ಗಳಿಂದ ನೀರು ತುಂಬಿಸಿಕೊಂಡು ಟ್ಯಾಂಕರ್‌ನಲ್ಲಿ ಪೂರೈಕೆ ಮಾಡುತ್ತಾರೆ.

‘ನೀರು ಪೂರೈಕೆಯಾಗದೆ 10 ದಿನಗಳು ಕಳೆದಿವೆ. ನಮ್ಮ ಸಮಸ್ಯೆ ಕೇಳುವವರಿಲ್ಲ. ಎರಡು ದಿನಕ್ಕೊಮ್ಮೆ ಮನೆಗೆ ಟ್ಯಾಂಕರ್‌ ನೀರು ಹಾಕಿಸಿಕೊಳ್ಳುತ್ತಿದ್ದೇವೆ’ ಎಂದು ಐಜಿ ರಸ್ತೆಯ ಎಲೆಕ್ಟ್ರಿಕಲ್ಸ್‌ ಅಂಗಡಿಯವರೊಬ್ಬರು ಸಂಕಷ್ಟ ತೋಡಿಕೊಂಡರು.

‘ಗೌರಿ ಕಾಲುವೆಗೆ ಎಂಟರಿಂದ ಹತ್ತು ದಿನಗಳಿಗೊಮ್ಮೆ ನೀರು ಬಿಡುತ್ತಾರೆ. ಇಲ್ಲಿನ ನೀರಿನ ಗೋಳು ಹೇಳತೀರದು ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿಸಿಲ್ಲ. ಟ್ಯಾಂಕರ್‌ನಲ್ಲಿ ನೀರು ತರಿಸಿಕೊಳ್ಳುತ್ತೇವೆ’ ಎಂದು ಮುಖಂಡರಾದ ಕೆ.ಆರ್‌.ಲೀಲಾ ಸಮಸ್ಯೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.