ನರಸಿಂಹರಾಜಪುರ: ತಾಲ್ಲೂಕಿನ ಸೀಗುವಾನಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದ್ದು, ಜ್ಯೋತಿಷಿ ಒಬ್ಬರ ಮಾತು ನಂಬಿ ಗ್ರಾಮವನ್ನು ತೊರೆದಿದ್ದ ಅಲೆಮಾರಿ ಜನಾಂಗದವರಿಗೆ ನಿವೇಶನ ನೀಡುವ ತಾಲ್ಲೂಕು ಆಡಳಿತ ನಿರ್ಧಾರಕ್ಕೆ ಅರಣ್ಯ ಇಲಾಖೆ ಅಡ್ಡಿಯಾಗಿದೆ.
2018ರಲ್ಲಿ ಜ್ಯೋತಿಷಿ ಮಾತು ನಂಬಿ ಗ್ರಾಮ ತೊರೆದಿದ್ದ ಅಲೆಮಾರಿ ಜನಾಂಗದವರಿಗೆ ತಾಲ್ಲೂಕು ಆಡಳಿತ ಕಾಯಂ ನಿವೇಶನ ನೀಡುವ ಭರವಸೆ ನೀಡಿ, ತಾಲ್ಲೂಕಿನ ಸೌತಿಕೆರೆ ಗ್ರಾಮದ ಬಾಗಿಲು ಮುಚ್ಚಿದ ಶಾಲೆಯ ಆವರಣದಲ್ಲಿ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿ 25ಕ್ಕೂ ಹೆಚ್ಚು ಕುಟುಂಬಗಳಿಗೆ ವಾಸ ಮಾಡಲು ಅವಕಾಶ ಕಲ್ಪಿಸಿತ್ತು. ನಂತರ ನಾಗಲಾಪುರ ಗ್ರಾಮದ ಸರ್ವೆ ನಂಬರ್ 179ರಲ್ಲಿ ನಿವೇಶನ ನೀಡಲು ತಾಲ್ಲೂಕು ಆಡಳಿತ ನಿರ್ಧರಿಸಿತ್ತು. ಆದರೆ ಇಲ್ಲಿ ಬೃಹತ್ ಗಾತ್ರದ ಅಕೇಶಿಯಾ ಮರಗಳಿರುವುದರಿಂದ ಈ ನಿವೇಶನ ಕೊಡಲು ಸಾಧ್ಯವಾಗುವುದಿಲ್ಲ ಎಂದು ಅರಣ್ಯ ಇಲಾಖೆ ತಕಾರರು ತೆಗೆದಿದ್ದ
ರಿಂದ ಇದಕ್ಕೆ ಹಿನ್ನಡೆಯಾಯಿತು.
ಈ ನಡುವೆ ತಮಗೆ ಕಾಯಂ ನಿವೇಶನ ನೀಡುವಂತೆ ಅಲೆಮಾರಿ ಜನಾಂಗದವರು ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಿದರು. ನಂತರ ಕಂದಾಯ ಇಲಾಖೆ ತಾಲ್ಲೂಕಿನ ಅರಳಿಕೊಪ್ಪ ಗ್ರಾಮದ ಸರ್ವೆ ನಂಬರ್ 108ರಲ್ಲಿ ಕಂದಾಯ ಇಲಾಖೆಯ ಜಾಗವನ್ನು ಗುರುತಿಸಿ ಅಲೆಮಾರಿ ಜನಾಂಗದವರಿಗೆ ನಿವೇಶನ ನೀಡಲು ತೀರ್ಮಾನಿಸಿತು. ಜಿಲ್ಲಾಧಿಕಾರಿ ಇದಕ್ಕೆ ಅನುಮೋದನೆ ನೀಡಿದರು. ಅರಣ್ಯ ಇಲಾಖೆಗೆ ಮರಗಳನ್ನು ತೆರವುಗೊಳಿಸಲು ಪತ್ರ ಬರೆಯಲಾಯಿತು. ಇದಕ್ಕೆ ಒಪ್ಪಿದ್ದ ಇಲಾಖೆ, ಈ ಜಾಗದಲ್ಲಿ ಪುನಃ ನೆಡುತೋಪು ನಿರ್ಮಾಣ ಆಗಿರುವುದರಿಂದ, ಮರ ತೆರವುಗೊಳಿಸಲು ಕೇಂದ್ರ ಸರ್ಕಾರದ ಅರಣ್ಯ ಸಚಿವಾಲಯದ ಒಪ್ಪಿಗೆ ಬೇಕಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಅರಣ್ಯ ಇಲಾಖೆಗೆ ಪುನಃ ಪತ್ರ: ‘ಮರ ತೆರವುಗೊಳಿಸಲು ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿತ್ತು. ಕೊಪ್ಪ ಡಿಎಫ್ಒ ಅವರು 70ಕ್ಕಿಂತ ಹೆಚ್ಚು ಮರ ಇರುವುದರಿಂದ ಉನ್ನತ ಅಧಿಕಾರಿಗಳ ಅನುಮತಿ ಅಗತ್ಯವಿದೆ ಎಂದು ಮರ ತೆರವುಗೊಳಿಸಿಲ್ಲ. ಈ ಬಗ್ಗೆ ಪುನಃ ಪತ್ರ ಬರೆಯಲಾಗುವುದು’ ಎಂದು ತಹಶೀಲ್ದಾರ್ ಎಸ್.ರೇಣುಕಾ ತಿಳಿಸಿದರು.
ಅರಳಿಕೊಪ್ಪ ಗ್ರಾಮದಲ್ಲಿ ಅಲೆಮಾರಿ ಜನಾಂಗಕ್ಕೆ ನೀಡಲು ಗುರುತಿಸಿರುವ ಜಾಗದಲ್ಲಿ ಮರ ತೆರವುಗೊಳಿಸಲು ತಾಂತ್ರಿಕ ಸಮಸ್ಯೆಯ ಕಾರಣದಿಂದ ಸಾಧ್ಯವಾಗಿಲ್ಲ ಎಂದು ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಸಂತೋಷ್ ಸಾಗರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.