ADVERTISEMENT

ಅಗ್ನಿಶಾಮಕ: ದಿಟ್ಟತನ ನೆನಪಿಸುವ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2015, 6:03 IST
Last Updated 15 ಏಪ್ರಿಲ್ 2015, 6:03 IST

ಚಿತ್ರದುರ್ಗ: ಎರಡನೇ ಮಹಾಯುದ್ಧದ ವೇಳೆ ಮುಂಬೈನಲ್ಲಿ ಹಡಗು ದುರಂತದಲ್ಲಿ ನಡೆದ ಅಗ್ನಿ ಅನಾಹುತ ತಪ್ಪಿಸುವ ವೇಳೆ 66 ದಕ್ಷ ಅಗ್ನಿಶಾಮಕ ಸಿಬ್ಬಂದಿ ಸಾವನ್ನಪಿದ್ದು, ಅವರ ನೆನಪಿಗಾಗಿ ಪ್ರತಿ ವರ್ಷ ಏಪ್ರಿಲ್ 14ರಿಂದ ಏಳು ದಿನಗಳ ಕಾಲ ಅಗ್ನಿಶಾಮಕ ಸೇವಾ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ’ ಎಂದು ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಪಿ.ಎಸ್.ಜಯರಾಮಯ್ಯ ಹೇಳಿದರು. ನಗರದ ಅಗ್ನಿಶಾಮಕ ಠಾಣೆಯಲ್ಲಿ ಮಂಗಳವಾರ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗ ಹುತಾತ್ಮ ಅಗ್ನಿಶಾಮಕ ಸಿಬ್ಬಂದಿಗೆ ಪುಷ್ಪ ನಮನ, ಗೌರವ ವಂದನೆ ನೀಡಿ ಅವರು ಮಾತನಾಡಿದರು.

‘ಅಗ್ನಿಶಮನ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿಯವರು ದಿಟ್ಟತನ, ಪ್ರಾಣ ತ್ಯಾಗ, ಬಲಿದಾನದಿಂದ ತಮ್ಮ ವೈಯಕ್ತಿಕ ಜೀವವನ್ನು ಬಲಿಕೊಟ್ಟು ಸಾರ್ವಜನಿಕರ ಪ್ರಾಣ, ಆಸ್ತಿ, ಮಾನರಕ್ಷಣೆಗಾಗಿ  ಮೃತಪಟ್ಟ ಸಿಬ್ಬಂದಿ ಆತ್ಮಕ್ಕೆ ಶಾಂತಿ ಮತ್ತು ಗೌರವ ಸೂಚಿಸುವುದು ಈ ಸೇವಾ ಸಪ್ತಾಹದ ಉದ್ದೇಶ’ ಎಂದು ಹೇಳಿದರು.

‘ಅಗ್ನಿಶಾಮಕ ಸಿಬ್ಬಂದಿಯು ಪ್ರತಿಯೊಂದು ತುರ್ತು ಸಂದರ್ಭಗಳಲ್ಲಿ  ಜೀವದ ಹಂಗು ತೊರೆದು ಪ್ರಾಣ ರಕ್ಷಣೆ ಮಾಡುತ್ತಾರೆ. ಲಿಂಗಭೇದವಿಲ್ಲದೇ, ವಯೋಭೇದವಿಲ್ಲದೇ ಜೀವ ರಕ್ಷಣೆಗೆ ಮುಂದಾಗುತ್ತಾರೆ. ಅಂಥ ಧೀರೋದ್ಧಾತ ಸಿಬ್ಬಂದಿಗೆ ಈ ಸಪ್ತಾಹದಲ್ಲಿ ನಮನ ಸಲ್ಲಿಸುತ್ತೇವೆ’ ಎಂದರು. ‘ಈ ಸಪ್ತಾಹ ಕೇವಲ ಸಮಾರಂಭವಷ್ಟೇ ಅಲ್ಲ. ಮುಂದಿನ ಕಾರ್ಯಗಳಿಗೆ ಸಿಬ್ಬಂದಿಯನ್ನು ಉತ್ತೇಜಿಸುವ ಕಾರ್ಯಕ್ರಮವೂ ಹೌದು.  ಜೊತೆಗೆ ಸಾರ್ವಜನಿಕರಿಗೆ ಅಗ್ನಿಅನಾಹುತ ಹಾಗೂ ಇತರೆ ತುರ್ತು ಸಂದರ್ಭಗಳ ಬಗ್ಗೆ ಮುನ್ನೆಚ್ಚರಿಕೆಯನ್ನು ಈ ಸಪ್ತಾಹದ ಮೂಲಕ ನೀಡಲಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.