ಹಿರಿಯೂರು: ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆ ಆಚರಣೆಯನ್ನು ತೊಡೆದು ಹಾಕುವ ಮೂಲಕ ಏಕತೆ ಸಾಧಿಸಬೇಕು ಎಂದು ಆದಿಜಾಂಬವ ಮಹಾಸಂಸ್ಥಾನ ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಕರೆ ನೀಡಿದರು.
ನಗರದ ನೆಹರೂ ಮೈದಾನದಲ್ಲಿ ಸೋಮವಾರ ಶ್ರೀ ಹನುಮತ್ ಶಕ್ತಿ ಜಾಗರಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಹಿಂದೂಗಳಲ್ಲಿ ದೌರ್ಬಲ್ಯ ಹೆಚ್ಚಾದರೆ ಬೇರೆಯವರು ಆಕ್ರಮಣ ಮಾಡಲು ಸುಲಭವಾಗುತ್ತದೆ. ಈಗ ಭಾವೈಕ್ಯತೆಯ ಜಾಗದಲ್ಲಿ ಭಯೋತ್ಪಾದನೆ, ಕರುಣೆಯ ಜಾಗದಲ್ಲಿ ಕ್ರೌರ್ಯ ಮನೆ ಮಾಡಿದೆ.ಭಾರತೀಯರಿಗೆ ಹೊರಗಿನಿಂದ ಬಂದವರು ಶಿಕ್ಷಣದ ಹೆಸರಿನಲ್ಲಿ, ಔಷಧೋಪಚಾರದ ಹೆಸರಿನಲ್ಲಿ ಮತಪ್ರಚಾರ ಮಾಡಬಾರದು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ರಾಜಕೀಯ ಲಾಭಕ್ಕಾಗಿ ಈ ಸಮಸ್ಯೆ ಬಳಕೆ ಆಗಬಾರದು. ದೇಶದ ಎಲ್ಲಾ ರಾಜ್ಯಗಳಂತೆ ಕಾಶ್ಮೀರಕ್ಕೂ ಸ್ಥಾನ ಮಾನ ನೀಡಬೇಕೇ ಹೊರತು ವಿಶೇಷ ಸ್ಥಾನ ಮಾನ ಸಲ್ಲದು ಎಂದು ಅವರು ತಿಳಿಸಿದರು.
ಭಯೋತ್ಪಾದನೆ, ನಕ್ಸಲಿಸಂ, ಮತಾಂತರ ಪ್ರಕ್ರಿಯೆಗಳು ಭಾರತೀಯ ಸಂಸ್ಕೃತಿಯ ಮೇಲೆ ದಬ್ಬಾಳಿಕೆ ನಡೆಸುತ್ತಿವೆ. ಜಾತಿ, ಪಕ್ಷ ನಿಷ್ಠೆ ಇರುವಷ್ಟು ಧರ್ಮನಿಷ್ಠೆ ಜನರಲ್ಲಿ ಇಲ್ಲದಿರುವುದು ವಿಷಾದದ ಸಂಗತಿ ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶಾಂತವೀರ ಸ್ವಾಮೀಜಿ ತಿಳಿಸಿದರು.
ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ಗುರುಗೆ ಗಲ್ಲು ಶಿಕ್ಷೆ ವಿಧಿಸಲು ಏಕೆ ತಡಮಾಡಲಾಗುತ್ತಿದೆ? ಜೈಲಿನಲ್ಲಿರುವ ಕಸಾಬ್ಗೆ ಇಲ್ಲಿವರೆಗೆ ್ಙ 84 ಲಕ್ಷ ಖರ್ಚು ಮಾಡಲಾಗಿದೆ.ಕಮಾಂಡೋಗಳನ್ನು ಅವನ ರಕ್ಷಣೆಗೆ ನೇಮಕ ಮಾಡಲಾಗಿದೆ. ಅವನ್ಯಾವ ದೊಡ್ಡ ಮನುಷ್ಯ ಎಂದು ಈ ರೀತಿ ಮಾಡುತ್ತಿದ್ದಾರೆ. ಹಿಂದೂಗಳು ಎಂದೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ. ಹಾಗೇನಾದರೂ ಆಗಿದ್ದರೆ ದೇಶ ಹೊತ್ತಿ ಉರಿಯುತ್ತಿತ್ತು. ದಿಗ್ವಿಜಯಸಿಂಗ್, ಚಿದಂಬರಂ, ರಾಹುಲ್ ಗಾಂಧಿಯಂತಹವರು ಹಿಂದೂಗಳ ವಿರುದ್ಧ ಹೇಳಿಕೆ ನೀಡುವ ಮೂಲಕ ಯಾರನ್ನು ತೃಪ್ತಿ ಪಡಿಸುತ್ತಿದ್ದಾರೆ ಎಂದು ಕಾಲೇಜು ವಿದ್ಯಾರ್ಥಿ ಪ್ರಚಾರಕ ಪ್ರದೀಪ್ ಪ್ರಶ್ನೆ ಮಾಡಿದರು. ಬಸವಕುಂಬಾರ ಗುಂಡಯ್ಯ ಸ್ವಾಮೀಜಿ, ಕೆ.ಆರ್. ವೆಂಕಟೇಶ್ ಮಾತನಾಡಿದರು. ಗುರುಸಿದ್ದಪ್ಪ ಸ್ವಾಮೀಜಿ ಉಪಸ್ಥಿತರಿದ್ದರು.
ದತ್ತಾತ್ರೇಯ, ಷಣ್ಮುಖ ದೇಶಭಕ್ತಿ ಗೀತೆ ಹಾಡಿದರು. ಸುಂದರರಾಜ್ ಸ್ವಾಗತಿಸಿದರು. ಕಲ್ಲೇಶ್ ವಂದಿಸಿದರು. ಬಿ. ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.