ADVERTISEMENT

ಉದ್ಯೋಗಖಾತ್ರಿ ಅಡಿ ಕೆಲಸ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 8:55 IST
Last Updated 8 ಮಾರ್ಚ್ 2011, 8:55 IST

ಮೊಳಕಾಲ್ಮುರು: ತಾಲ್ಲೂಕಿನ ನೇರ್ಲಹಳ್ಳಿಯಲ್ಲಿ ಸೋಮವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಉದ್ಯೋಗಖಾತ್ರಿ ಅಡಿಯಲ್ಲಿ ಕೆಲಸ ನೀಡುತ್ತಿಲ್ಲ ಎಂದು ಮಾತಿನ ಚಕಮಕಿ ನಡೆಸಿದರು. ಸದಸ್ಯರು ತಮ್ಮ ಹತ್ತಿರದವರಿಗೆ, ಸಂಬಂಧಿಗಳಿಗೆ ಮಾತ್ರ ಕೆಲಸ ನೀಡುತ್ತಿದ್ದಾರೆ. ವಾರ್ಡ್ ಪ್ರಕಾರ ಕೆಲಸ ನೀಡಲು ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ಗ್ರಾ.ಪಂ. ಅಡಿಯಲ್ಲಿ ಕೈಗೊಂಡಿರುವ ಕಾರ್ಯಗಳ ವಿವರ, ಮಂಜೂರಾದ ಅನುದಾನದ ವಿವರ ನೀಡಬೇಕು. ಪರಿಶಿಷ್ಟ ಜಾತಿ, ಪಂಗಡದವರಿಗೆ ನಿಗದಿ ಮಾಡಿರುವ ಅನುದಾನ ಬಳಕೆ ಮಾಡಿರುವ ಬಗ್ಗೆ ಕೂಡಲೇ ವಿವರ ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿ ಈ ವರ್ಷ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಒಟ್ಟು ` 60 ಲಕ್ಷಕ್ಕೆ ಕ್ರಿಯಾಯೋಜನೆ ಮಾಡಿದ್ದು, ಕಾಮಗಾರಿ ಸೇರ್ಪಡೆಗೆ ಅವಕಾಶವಿದೆ. ಅರ್ಹ ಕಾಮಗಾರಿ ಇದ್ದಲ್ಲಿ ಪಟ್ಟಿ ನೀಡಬಹುದು ಎಂದು ಹೇಳಿದರು. ಗ್ರಾ.ಪಂ. ಅಧ್ಯಕ್ಷೆ ಬಂಡೆಮ್ಮ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಮಾರಕ್ಕ, ತಾ.ಪಂ. ಅಧ್ಯಕ್ಷೆ ಟಿ. ರತ್ನಮ್ಮ ಮಹೇಶ್, ನೊಡೆಲ್ ಅಧಿಕಾರಿ ಡಾ. ಶಿವರುದ್ರಪ್ಪ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.