ಹೊಸದುರ್ಗ: ತಾಲ್ಲೂಕಿನಲ್ಲಿ ಈ ಬಾರಿಯೂ ಮುಂಗಾರು ಮಳೆ ಕೈಕೊಟ್ಟಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಭೂಮಿಯಲ್ಲಿರುವ ನೀರು ಹೊರತೆಗೆಯಲು ಹಗಲು, ರಾತ್ರಿ ಕೊಳವೆ ಬಾವಿ ಕೊರೆಸುತ್ತಿರುವ ಸದ್ದು ಕೇಳಿ ಬರುತ್ತಿದೆ.
ಉತ್ತಮವಾಗಿ ನೀರು ಪೂರೈಸುತ್ತಿದ್ದ ಹಲವು ಕೊಳವಬಾವಿಗಳು ಸ್ಥಗಿತವಾಗಿವೆ. 700–800 ಅಡಿ ಆಳದವರೆಗೆ ಭೂಮಿಯನ್ನು ಕೊರೆಸಿದರೂ ಬರೀ ದೂಳು ಹೊರ ಬರುತ್ತಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬಿತ್ತನೆ ಮಾಡಿದ್ದ ಸಾವಿರಾರು ಹೆಕ್ಟೇರ್ ಬೆಳೆ ಒಣಗಿದೆ.
ಎರಡು ಎಕರೆ ಜಮೀನು ಇರುವವರು ತೋಟಗಾರಿಕೆ, ತರಕಾರಿ ಬೆಳೆಗೆ ಕೊಳವೆಬಾವಿ ಕೊರೆಸುತ್ತಿದ್ದಾರೆ. ‘ಮಳೆ ಬರದಿದ್ದರೆ ಭೀಕರ ಜಲಕ್ಷಾಮ ಎದುರಿಸಬೇಕಾಗುತ್ತದೆ. ಮಳೆಗಾಲದಲ್ಲಿ ಮನೆಯ ಚಾವಣಿ ಮೇಲೆ ಬೀಳುವ ನೀರನ್ನು ನೆಲದಲ್ಲಿ ಇಂಗಿಸುವ ಕೆಲಸ ಮಾಡಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗುತ್ತದೆ’ ಎನ್ನುತ್ತಾರೆ ಹಿರಿಯ ನಾಗರಿಕರಾದ ಹನುಮಂತಪ್ಪ, ನಾಗಪ್ಪ.
ತಾಲ್ಲೂಕಿನಲ್ಲಿ 2,216 ಕೊಳವೆಬಾವಿಗಳು
33 ಗ್ರಾಮ ಪಂಚಾಯ್ತಿಗಳಲ್ಲಿ 2.12 ಲಕ್ಷ ಹಾಗೂ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ 28 ಸಾವಿರ ಜನಸಂಖ್ಯೆಯಿದೆ. ಇಡೀ ತಾಲ್ಲೂಕಿನಲ್ಲಿ ಒಟ್ಟು ಸುಮಾರು 2.41 ಲಕ್ಷವಿದೆ.
ಕುಡಿಯುವ ನೀರು ಪೂರೈಕೆಗೆ 276, ಕಿರು ನೀರು ಸರಬರಾಜಿಗೆ 638, ಕೈಪಂಪ್ಗೆ 1,301 ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 2,216 ಕೊಳವೆ ಬಾವಿ ಕೊರೆಸಲಾಗಿದೆ.
ಅಂತರ್ಜಲ ಕುಸಿತದಿಂದ 1,070 ಕೊಳವೆಬಾವಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ರೈತರು ಜಮೀನಿನಲ್ಲಿ ಕೊರೆಸಿದ ಕೊಳವೆಬಾವಿಗಳ ಮಾಹಿತಿ ಲಭ್ಯವಿಲ್ಲ ಎಂದು ತಾಲ್ಲೂಕು ಪಂಚಾಯ್ತಿ ಹಾಗೂ ಪುರಸಭೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಸುಸ್ಥಿತಿಯಲ್ಲಿರುವ ಟ್ಯಾಂಕ್ಗಳು (ಅಂಕಿ–ಅಂಶ)
160 ಪೈಪ್ಲೈನ್ ಆಧಾರಿತ ಘಟಕಗಳು
430 ಕಿರು ನೀರು ಸರಬರಾಜು ಘಟಕಗಳು
560 ಚಾಲನೆಯಲ್ಲಿರುವ ಕೈಪಂಪ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.