ADVERTISEMENT

ಕಳಪೆ ಶೇಂಗಾ ಬಿತ್ತನೆಬೀಜ ವಿತರಣೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 6:45 IST
Last Updated 7 ಜೂನ್ 2011, 6:45 IST

ಚಳ್ಳಕೆರೆ: ತಾಲ್ಲೂಕಿನಲ್ಲಿ ರೈತರಿಗೆ ವಿತರಿಸುತ್ತಿರುವ ಶೇಂಗಾ ಬಿತ್ತನೆ ಬೀಜದಲ್ಲಿ ಕಳಪೆ ಗುಣಮಟ್ಟದ್ದು ಎನ್ನಲಾಗುವ ಜೊಳ್ಳು ಹಿಡಿದ ಶೇಂಗಾ ಸೋಮವಾರದ ವಿತರಣೆಯಲ್ಲಿ ಕಂಡುಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ತಾ.ಪಂ. ಅಧ್ಯಕ್ಷೆ ಬೋರಮ್ಮ ಹಾಗೂ ಉಪಾಧ್ಯಕ್ಷ ಎಂ.ಎಸ್. ಮಂಜುನಾಥ್ ಎಪಿಎಂಸಿ ಆವರಣದಲ್ಲಿರುವ ವಿತರಣಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಬೋರಮ್ಮ ಮಾತನಾಡಿ, ರೈತರಿಗೆ ವಿತರಿಸುವ ಬಿತ್ತನೆ ಬೀಜ ಗುಣಮಟ್ಟದ್ದಾಗಿರಬೇಕು.

ಇದರಲ್ಲಿ ಜೊಳ್ಳು ತುಂಬಿರುವ ಶೇಂಗಾ ಇದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಶೇಂಗಾ ಚೀಲಗಳ ಒಳಗಡೆ ಎಂಥಹ ಶೇಂಗಾ ಇದೆ ಎಂಬುದನ್ನು ನೋಡಲು ಸಾಧ್ಯವಿಲ್ಲ. ಹಣ ಕೊಟ್ಟು ಶೇಂಗಾ ಖರೀದಿಸಿದ ರೈತರು ಇಂತಹ ಬೀಜವನ್ನು ನೋಡಿ ಅಧಿಕಾರಿಗಳಿಗೆ ಖಂಡಿತ ಶಾಪ ಹಾಕುತ್ತಾರೆ. ಅದ್ದರಿಂದ, ಉತ್ತಮ ಗುಣಮಟ್ಟದ ಶೇಂಗಾ ತರಿಸಿಕೊಡಬೇಕು ಎಂದು ಸ್ಥಳದಲ್ಲಿದ್ದ ಕೃಷಿ ತಾಂತ್ರಿಕ ಅಧಿಕಾರಿ ರವಿ ಅವರಿಗೆ ತಾಕೀತು ಮಾಡಿದರು.

ಸ್ಥಳದಲ್ಲಿದ್ದ ರೈತರು ಜೊಳ್ಳು ಹಿಡಿದ ಶೇಂಗಾ ಬೀಜವನ್ನು ನೋಡಿ ಇಂತಹ ಬೀಜವನ್ನು ಕೊಟ್ಟು ನಮ್ಮನ್ನು ಹಾಳು ಮಾಡಲು ನಿಂತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

30 ಕೆ.ಜಿ. ತೂಕವಿರುವ ಶೇಂಗಾ ಚೀಲ ಕಡಿಮೆ ತೂಕ ಹೊಂದಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ. ಅದ್ದರಿಂದ, ರೈತರಿಗೆ ಮೋಸ ಮಾಡದೇ ಪ್ರಾಮಾಣಿಕತೆ ಪ್ರದರ್ಶಿಸಿ ಎಂದು ತಾ.ಪಂ. ಉಪಾಧ್ಯಕ್ಷ ಮಂಜುನಾಥ್ ಹೇಳಿದರು.

ನಂತರ ಸುವರ್ಣ ಭೂಮಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಂದ ದಾಖಲೆ ಪಡೆಯುವಾಗ ್ಙ 100 ಲಂಚ ಕೇಳುತ್ತಿದ್ದಾರೆ ಎಂದು ರೈತರಿಂದ ಬಂದ ಮಾಹಿತಿ ಮೇಲೆ ಕೃಷಿ ಕಚೇರಿಗೆ ತೆರಳಿದ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ಲಂಚ ಕೇಳುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸ್ಥಳದಲ್ಲಿದ್ದ ಅಧಿಕಾರಿಗಳು ಇಲ್ಲಿ ಯಾವೊಬ್ಬ ಅಧಿಕಾರಿಯೂ ರೈತರಿಂದ ಲಂಚ ಕೇಳಿಲ್ಲ.
ಅಂತಹ ಆರೋಪ ಇದ್ದರೆ, ಲಂಚ ಕೊಟ್ಟ ರೈತರನ್ನು ಕರೆಸಿ ಎಂದಾಗ ಅರ್ಜಿ ಹಿಡಿದು ನಿಂತಿದ್ದ ರೈತರು ಮಾತ್ರ ಇಲ್ಲಿ ಯಾರೂ ಲಂಚ ಕೇಳಿಲ್ಲ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.