ADVERTISEMENT

ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 7:07 IST
Last Updated 5 ಅಕ್ಟೋಬರ್ 2017, 7:07 IST

ಹೊಳಲ್ಕೆರೆ: ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಕಾಡುಗೊಲ್ಲ ಜನಾಂಗವನ್ನು ಜಾತಿಪಟ್ಟಿಯಲ್ಲಿ ಸೇರಿಸಿ, ನಂತರ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ಕೆ.ಶಿವಮೂರ್ತಿ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಡುಗೊಲ್ಲ ಜನಾಂಗ ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ. ಈ ಜನಾಂಗವನ್ನು ಜಾತಿಪಟ್ಟಿಗೆ ಸೇರಿಸಿಲ್ಲ. ಇದರಿಂದ ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಎಂಬ ಬೇಡಿಕೆಯ ಕಡತ ವಾಪಸ್ ಬಂದಿದೆ. ಈ ಬಗ್ಗೆ ಅನೇಕ ಬಾರಿ ಪ್ರತಿಭಟನೆ, ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಸಮಾಜ ಕಲ್ಯಾಣ ಸಚಿವರು ಈ ಬಗ್ಗೆ ಗಮನ ಹರಿಸಬೇಕು. ಸೌಲಭ್ಯ ವಂಚಿತ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡ (ಎಸ್ ಟಿ)ಕ್ಕೆ ಸೇರ್ಪಡೆ ಮಾಡಲು ಶಿಫಾರಸು ಮಾಡಬೇಕು. ತಾಲ್ಲೂಕಿನ →ಗೊಲ್ಲರಹಟ್ಟಿಗಳಲ್ಲಿ →ಯಾದವ →ಭವನಗಳು, ಸಿಸಿ ರಸ್ತೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು →ಕೈಗೊಳ್ಳಬೇಕು. →ಯಾದವ ಸಮಾಜಕ್ಕೆ 3 ಎಕರೆ ಜಾಗ ಕೊಡಬೇಕು ಎಂದು ಆಗ್ರಹಿಸಿದರು.

ಯಾದವ ಜನಾಂಗದ ಮುಖಂಡ ಕಿರಣ್ ಕುಮಾರ್ ಮಾತನಾಡಿ, ‘ಯಾದವರು ಅತಿ ಹೆಚ್ಚು ಮತಗಳನ್ನು ನೀಡಿ ಎಚ್.ಆಂಜನೇಯ ಅವರನ್ನು ಗೆಲ್ಲಿಸಿದ್ದಾರೆ. ಆದರೆ, ಯಾದವ ಜನಾಂಗಕ್ಕೆ →ಸಚಿವರು ಹೆಚ್ಚು ಕೊಡುಗೆ ನೀಡಿಲ್ಲ ಎಂದು ಸಮಾಜದ ಜನ ಆರೋಪ ಮಾಡುತ್ತಿದ್ದಾರೆ. ಹೋದಲ್ಲೆಲ್ಲ → ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸಚಿವರು ನಮ್ಮ ಸಮಾಜದ ಬೇಡಿಕೆಗಳನ್ನು ಈಡೇರಿಸಬೇಕು’ ಎಂದರು.

ADVERTISEMENT

ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಹಾಲಸ್ವಾಮಿ ಮಾತನಾಡಿ, ‘ತಾಲ್ಲೂಕಿನಲ್ಲಿ 30 ಸಾವಿರ ಯಾದವರ ಮತಗಳಿದ್ದು, ಇಲ್ಲಿನ ಶಾಸಕರ ಗೆಲುವಿಗೆ ನಮ್ಮ ಮತಗಳೇ ನಿರ್ಣಾಯಕ ಆಗಲಿವೆ. ಆದರೂ ನಮ್ಮ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ನಿಗಮ, ಮಂಡಳಿಗಳಿಗೆ ನೇಮಕ ಮಾಡುವಾಗ ನಮ್ಮ ಜನಾಂಗದವರಿಗೆ ಆದ್ಯತೆ ನೀಡಬೇಕು. ಮುಂದಿನ ತಿಂಗಳು ತಾಲ್ಲೂಕಿನಲ್ಲಿ ಬೃಹತ್ ಯಾದವ ಸಮಾವೇಶ ನಡೆಸಿ ಸಂಘಟನೆ ಮಾಡಲಾಗುವುದು’ ಎಂದರು.

ಯಾದವ ಸಮಾಜದ ಮುಖಂಡ ಚಿತ್ರಹಳ್ಳಿ ಹಳ್ಳಪ್ಪ, ಯಾದವ ಸಮಾಜದ ಕಾರ್ಯದರ್ಶಿ ತಿಮ್ಮಪ್ಪ, ಯಾದವ ನೌಕರರ ಸಂಘದ ಅಧ್ಯಕ್ಷ ಎನ್‌.ಶಿವಮೂರ್ತಿ, ಎ.ಜಯಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ರಾಮಚಂದ್ರಪ್ಪ, ಚಿತ್ತಪ್ಪ, ಪುಷ್ಪಾ ತಿಪ್ಪೇಶ್, ಬಾಬು, ರಂಗಪ್ಪ, ಬಾಬಣ್ಣ, ಲಿಂಗರಾಜು, ಬಸವರಾಜ್, ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.