ಚಿತ್ರದುರ್ಗ:ಮುರುಘಾಮಠದ 2017ನೇ ಸಾಲಿನ ‘ಬಸವ ಶ್ರೀ’ ಪ್ರಶಸ್ತಿಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಪ್ರಕೃತಿ ಸಂರಕ್ಷಕ ಕಾಮೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
ಮುರುಘಾಮಠದ ಅಲ್ಲಮಪ್ರಭು ಸಭಾಂಗಣದಲ್ಲಿ ಏಪ್ರಿಲ್ 15ರಂದು ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಿವಮೂರ್ತಿ ಮುರುಘಾ ಶರಣರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಶಸ್ತಿಯು ₹ 5 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಮಳವಳ್ಳಿ ತಾಲ್ಲೂಕಿನ ಕುಂದನಿ ಪರ್ವತದ ಮೇಲೆ ಕೆರೆ, ಕಟ್ಟೆ ಕಟ್ಟಿರುವ ಕಾಮೇಗೌಡ ಅವರು ಪ್ರಕೃತಿ ಸಂರಕ್ಷಕ ಎಂದೇ ಖ್ಯಾತರಾಗಿದ್ದಾರೆ. ಬಿಸಿಲಿನ ಬೇಗೆಯಿಂದ ತತ್ತರಿಸುವ ಜೀವರಾಶಿಗಳಿಗೆ ಜೀವಜಲ ನೀಡುವ ಮಹಾಂತರಾಗಿದ್ದಾರೆ. ಬಸವಣ್ಣನವರ ಕಾಯಕ ತತ್ವವನ್ನು ಕಾಮೇಗೌಡರು ಪಾಲಿಸುತ್ತಿದ್ದಾರೆ ಎಂದು ಶರಣರು ತಿಳಿಸಿದರು.
ಜಯಂತಿಗಳಿಗೆ ರಜೆ ಬೇಡ: ದಾರ್ಶನಿಕರ ಜಯಂತಿಗಳಿಗೆ ಸರ್ಕಾರ ರಜೆ ನೀಡುವುದು ಸೂಕ್ತವಲ್ಲ. ಬಸವಾದಿ ಶರಣರಿಂದ ಪ್ರತಿಯೊಬ್ಬ ಮಹನೀಯರು ಕೂಡ ಕಾಯಕ ತತ್ವಕ್ಕೆ ಮಹತ್ವ ನೀಡಿದ್ದಾರೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ, ನೀಡಿರುವ ರಜೆಗಳನ್ನು ಹಿಂಪಡೆಯಬೇಕು ಎಂದು ಶರಣರು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.