ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆಯಲ್ಲಿ ಮಂಗಳವಾರ ನಡೆದ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಅದ್ದೂರಿ ಸಾರ್ವಜನಿಕ ಸಮಾವೇಶಕರ್ನಾಟಕ ಜನತಾಪಕ್ಷ(ಕೆಜೆಪಿ)ದ ಸಮಾವೇಶವಾಗಿಯೇ ಪರಿವರ್ತನೆಗೊಂಡಿತ್ತು.
ಅಧಿಕೃತವಾಗಿ ಕೆಜೆಪಿ ಹೆಸರು ಬಳಸಿದಿದ್ದರೂ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹೊಗಳಲು ಮತ್ತು ಬಿಜೆಪಿ ಮುಖಂಡರನ್ನು ತೆಗಳಲು ಸಮಾವೇಶ ವೇದಿಕೆ ಕಲ್ಪಿಸಿತು. ಜತೆಗೆ, ಶಾಸಕ ಚಂದ್ರಪ್ಪ ಅವರ ಶಕ್ತಿ ಪ್ರದರ್ಶನಕ್ಕೂ ಇದು ಸಾಕ್ಷಿಯಾಯಿತು.
ಅಪಾರ ವೆಚ್ಚದಲ್ಲಿ ಶಾಸಕ ಚಂದ್ರಪ್ಪ ಆಯೋಜಿಸಿದ್ದ ಈ ಸಮಾವೇಶ ಜಿಲ್ಲೆಯ ಮೊದಲ ಕೆಜೆಪಿ ಸಮಾವೇಶವಾಯಿತು. ಯಡಿಯೂರಪ್ಪ ಅವರು ಭಾಷಣ ಆರಂಭಿಸುವ ಮುನ್ನ ಕೆಜೆಪಿಗೆ ಜೈಕಾರ ಹಾಕಿಸಿ, ತಮ್ಮ ಸಾಧನೆಗಳನ್ನು ಹೇಳಿಕೊಂಡು, ಈ ಸರ್ಕಾರದ ಮುಲಾಜು ನನಗಿಲ್ಲ ಎಂದರು.
ಇನ್ನೂ ಸಚಿವರಾದ ಬಿ.ಜೆ. ಪುಟ್ಟಸ್ವಾಮಿ, ರೇಣುಕಾಚಾರ್ಯ, ಶಾಸಕ ಬಿ.ಪಿ. ಹರೀಶ್, ಮಾಡಾಳು, ವಿರೂಪಾಕ್ಷಪ್ಪ, ಮಾಜಿ ಶಾಸಕರಮೇಶ್, ಮುಖಂಡರಾದ ಲಿಂಗಮೂರ್ತಿ, ಸಿರಿಗೆರೆ ಬಸವಂತಪ್ಪ, ಜಿ.ಪಂ. ಸದಸ್ಯರಾದ ಶಿವಕುಮಾರ್, ಆರ್. ಹನುಮಂತಪ್ಪ ಸೇರಿದಂತೆ ಹಲವರು ಬಹಿರಂಗವಾಗಿ ಯಡಿಯೂರಪ್ಪ ಜತೆ ಗುರುತಿಸಿಕೊಂಡರು.
ಯಡಿಯೂರಪ್ಪ ಅವರಿಗೆ ಬೆಂಬಲ ಸೂಚಿಸಿದ ಶಾಸಕ ಚಂದ್ರಪ್ಪ, ನನ್ನಲ್ಲಿ ತೊಟ್ಟು ರಕ್ತ ಇರುವವರೆಗೂ ನಿಮ್ಮ ಜತೆಗಿರುತ್ತೇನೆ. ಈ ಕ್ಷಣ ಸಹ ರಾಜೀನಾಮೆ ನೀಡಲು ಸಿದ್ಧ ಎಂದು ಘಂಟಾಘೋಷವಾಗಿ ಹೇಳಿದರು.
ಕೆಜೆಪಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಬಿ.ಕೆ. ಸಯ್ಯದ್ ಮಾತನಾಡಿ, ಇದುವರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಸ್ಲಿಂರನ್ನು ಕೇವಲ ವೋಟ್ಬ್ಯಾಂಕ್ ಆಗಿ ಬಳಸಿಕೊಂಡಿವೆ. ಈ ಮೊದಲು ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗೆ ಕೇವಲ ್ಙ 30 ಕೋಟಿ ಮಾತ್ರ ಮೀಸಲಿಟಿದ್ದರು. ಆದರೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಹತ್ತುಪಟ್ಟು ಹೆಚ್ಚಿಸಿದರು. ಬೆಂಗಳೂರಿನಲ್ಲಿ ಹಜ್ ಭವನ ನಿರ್ಮಿಸಿದರು ಎಂದು ಯಡಿಯೂರಪ್ಪ ಅವರನ್ನು ಹೊಗಳಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಯಡಿಯೂರಪ್ಪ ಅವರಿಗೆ ಬಿಜೆಪಿ ಮುಖಂಡರು ಕೊಡಬಾರದ ಹಿಂಸೆ ಕೊಟ್ಟರು. ಯಡಿಯೂರಪ್ಪ ಕಣ್ಣೀರು ಹಾಕುವ ಹಾಗೆ ಹಿಂಸೆ ನೀಡಿದರು. ಪಕ್ಷ ಬಿಡುವವರೆಗೂ ಈ ಮುಖಂಡರು ನಿದ್ದೆ ಮಾಡಲಿಲ್ಲ. ಕೊನೆಗೂ ಬಿಜೆಪಿಯಿಂದ ಹೊರಗೆ ಹಾಕಿದರು. ಆದರೆ, ಜನತೆಯ ಆಶೀರ್ವಾದ ಯಡಿಯೂರಪ್ಪ ಅವರಿಗಿದೆ ಎಂದು ನುಡಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಯಡಿಯೂರಪ್ಪ ಅವರನ್ನು ಜನತೆ ಬೆಂಬಲಿಸಬೇಕು. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರಿಗೆ ಬೆಂಬಲ ನೀಡಬೇಕು ಎಂದು ಕೋರಿದರು.
ಸಮಾವೇಶಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ವಾಹನ, ಊಟದ ವ್ಯವಸ್ಥೆಯನ್ನು ಶಾಸಕ ಚಂದ್ರಪ್ಪ ಮಾಡಿದ್ದರು. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.