ADVERTISEMENT

ಖಾತ್ರಿ ಅನುದಾನ ದುರ್ಬಳಕೆ:ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 9:15 IST
Last Updated 4 ಜುಲೈ 2012, 9:15 IST

ಚಿತ್ರದುರ್ಗ:  ಜಿಲ್ಲೆಯ ಗ್ರಾಮ ಪಂಚಾಯ್ತಿಗಳಲ್ಲಿ ಉದ್ಯೋಗ ಖಾತ್ರಿ ಹಣ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂದು  ರಾಷ್ಟ್ರೀಯ ಕಿಸಾನ್ ಸಂಘ ಒತ್ತಾಯಿಸಿದೆ.

ಉದ್ಯೋಗ ಖಾತ್ರಿ ಯೋಜನೆ ಆರಂಭವಾದ ನಂತರ ಇದುವರೆಗೆ 43 ನೌಕರರನ್ನು ಅಮಾನತುಗೊಳಿಸಿ ದುರ್ಬಳಕೆಯಾಗಿದ್ದ ್ಙ 9,52,401 ಹಣ ವಸೂಲಾತಿಗೆ ಇಲಾಖೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ಒತ್ತಾಯಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆ ಅವ್ಯವಹಾರ, ನಿಯಮಾವಳಿ ಉಲ್ಲಂಘನೆ ಹಾಗೂ ಕರ್ತವ್ಯ ನಿರ್ಲಕ್ಷ್ಯ ಆರೋಪಕ್ಕೆ ಸಂಬಂಧಿಸಿದಂತೆ ಯೋಜನೆ ಅನುಷ್ಠಾನದ ದಿನದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 43 ನೌಕರರನ್ನು ಅಮಾನತುಗೊಳಿಸಲಾಗಿದೆ. ಇವರಲ್ಲಿ 30 ಮಂದಿ ಗ್ರಾಮ ಪಂಚಾಯ್ತಿ ಕಾರ‌್ಯದರ್ಶಿಗಳು, ಏಳು ಮಂದಿ ಪಿಡಿಒ ಹಾಗೂ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಆರು ಮಂದಿ ಕಿರಿಯ ಎಂಜಿನಿಯರ್ ಸೇರಿದ್ದಾರೆ ಎಂದು ತಿಳಿಸಿದ್ದಾರೆ.

ಅಮಾನತಿಗೆ ಒಳಗಾಗಿ ಇಲಾಖಾ ವಿಚಾರಣೆ ಮುಕ್ತಾಯವಾಗಿ ವೇತನ ಬಡ್ತಿ ತಡೆ ಹಿಡಿದು ದಂಡನೆಗೆ ಒಳಗಾದವರು 17 ಮಂದಿ ಇದ್ದರೆ, ಕರ್ತವ್ಯ ನಿರ್ಲಕ್ಷ್ಯಕ್ಕಾಗಿ 16 ಮಂದಿ ಅಮಾನತುಗೊಂಡಿದ್ದಾರೆ. ಇಬ್ಬರು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.

ಅದೇ ರೀತಿ ಓರ್ವ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಕೂಡ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಸದ್ಯ 13 ಮಂದಿ ನೌಕರರ ಇಲಾಖೆ ವಿಚಾರಣೆ ನಡೆಯುತ್ತಿದೆ. ಅವ್ಯವಹಾರ ಮಾಡಿದವರ ಪೈಕಿ ನಾಲ್ಕು ಮಂದಿಯಿಂದ ್ಙ 9,52,401 ವಸೂಲಿ ಮಾಡಲಾಗಿದೆ. ಹಣ ದುರುಪಯೋಗ ಮಾಡಿದ ಇಬ್ಬರು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ನಿಧನ ಹೊಂದಿದ್ದಾರೆ. ಒಬ್ಬ ಮಹಿಳಾ ಕಾರ್ಯದರ್ಶಿ ಉದ್ಯೋಗದಿಂದ ವಜಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಾಲ್ಲೂಕಿನ ಗೋನೂರು ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಎಸ್.ಎಂ. ಸಂತೋಷ್‌ಕುಮಾರ್ 2009ರ ಮಾರ್ಚ್ 18ರಂದು ಕುಡಿಯುವ ನೀರು ಯೋಜನೆಗೆಂದು ಕಾಯ್ದಿರಿಸಿದ್ದ ಸುಮಾರು ್ಙ 7.80 ಲಕ್ಷ ಮೊತ್ತ ಅಧ್ಯಕ್ಷರ ಸಹಿ ಪಡೆದು ಸ್ವಂತಕ್ಕೆ ಡ್ರಾ ಮಾಡಿಕೊಂಡು ದುರುಪಯೋಗ ಪಡಿಸಿಕೊಂಡಿದ್ದರು. ಪ್ರಕರಣ ಬಯಲಾಗಿ ಆತನನ್ನು ಅಮಾನತುಗೊಳಿಸಲಾಗಿತ್ತು. ನಂತರ ಆತ ್ಙ  7.80 ಲಕ್ಷ ಮೊತ್ತ ಗ್ರಾಮ ಪಂಚಾಯ್ತಿ ನಿಧಿಗೆ ಮರು ಜಮಾ ಮಾಡಿದ್ದಾರೆ.

ವಾರ್ಷಿಕ ಬಡ್ತಿ ತಡೆ ಹಿಡಿದು ಆತನಿಗೆ ದಂಡ ವಿಧಿಸಲಾಗಿದೆ. ಅದೇ ರೀತಿ ಸಿದ್ದೇಶ್ವರನದುರ್ಗ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಎಚ್. ರಾಜೀವ್ ್ಙ  97 ಸಾವಿರ  ಬೇಡರೆಡ್ಡಿಹಳ್ಳಿ ಕಾರ್ಯದರ್ಶಿ ಜಿ. ಧೀರೇಂದ್ರ ರೆಡ್ಡಿ ್ಙ  33,500 ಹಾಗೂ ಸಿದ್ದೇಶ್ವರನದುರ್ಗ ಗ್ರಾ.ಪಂ. ಕಾರ್ಯದರ್ಶಿ ಮಹಾಲಿಂಗಪ್ಪ ್ಙ 41,260 ದುರುಪಯೋಗ ಪಡಿಸಿಕೊಂಡಿದ್ದರು. ಅವರಿಂದ ವಸೂಲಿ ಮಾಡಿ ಗ್ರಾಮ ಪಂಚಾಯ್ತಿ ನಿಧಿಗೆ ಮರು ಜಮೆ ಮಾಡಲಾಗಿದೆ ಎಂದು ಮಾಹಿತಿ ಹಕ್ಕಿನಲ್ಲಿ ತಿಳಿಸಿದ್ದಾರೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.