ADVERTISEMENT

ನೀರಿನ ಸಮಸ್ಯೆ ಎದುರಿಸಲು ಸಜ್ಜಾಗಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 8:15 IST
Last Updated 12 ಜನವರಿ 2012, 8:15 IST

ಚಿತ್ರದುರ್ಗ: ಮುಂದಿನ ಫೆಬ್ರುವರಿಯಿಂದ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪೂರ್ವಸಿದ್ಧತೆ, ಬಾಲಕಾರ್ಮಿಕರ ಪತ್ತೆಗೆ ವಾರದ ಗಡುವು, ಬಿಸಿಯೂಟದಲ್ಲಿ ಗಟ್ಟಿಸಾರು - ತಿಳಿಸಾರು, ಉದ್ಯೋಗ ಖಾತ್ರಿ, ವಿದ್ಯಾರ್ಥಿವೇತನ ವಿಳಂಬ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ ಕಡ್ಡಾಯ..

- ಈ ಎಲ್ಲ ವಿಷಯಗಳು ಕುರಿತು ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಜಿ.ಪಂ. ಉಪಾಧ್ಯಕ್ಷೆ ಹಾಗೂ ಪ್ರಭಾರ ಅಧ್ಯಕ್ಷೆ ವಿಜಯಮ್ಮ ಎಂ. ಜಯಣ್ಣ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಚರ್ಚಿಸಲಾಯಿತು.

ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎನ್. ಜಯರಾಮ್ ಮಾತನಾಡಿ, ಈಗಾಗಲೇ ಜಿಲ್ಲೆಯ ವಿವಿಧೆಡೆ ಜಿ.ಪಂ. ಅನುದಾನ ಮತ್ತು ಜಿಲ್ಲಾಧಿಕಾರಿ ಬರ ಪರಿಹಾರ ನಿಧಿಯಿಂದ ಕುಡಿಯುವ ನೀರು ಸಮಸ್ಯೆ ಇರುವ 145 ಗ್ರಾಮಗಳಲ್ಲಿ ಕಾಮಗಾರಿಗಳನ್ನು ಕೈಗೊಂಡು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದ್ದು, ಉಳಿದ ಕಾಮಗಾರಿಗಳನ್ನು ಶೀಘ್ರ ಪೊರ್ಣಗೊಳಿಸಲಾಗುವುದು. ಫೆಬ್ರುವರಿಯಿಂದ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

ಜಿಲ್ಲೆಯ ಹೋಟೆಲ್, ಗ್ಯಾರೇಜ್, ಅಂಗಡಿ ಸೇರಿದಂತೆ ವಿವಿಧೆಡೆಗಳಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ವಾರದೊಳಗೆ ಪತ್ತೆಮಾಡಿ ವರದಿ ಸಲ್ಲಿಸಬೇಕು ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿಗದಿತ ಅವಧಿಯೊಳಗೆ ವಿದ್ಯಾರ್ಥಿವೇತನ ವಿತರಣೆಗೆ ವಿಳಂಬ ಮಾಡುತ್ತಿರುವ ಆರೋಪಗಳಿದ್ದು, ಜ. 25ರ ಒಳಗೆ ಎಲ್ಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಅಕ್ಷರ ದಾಸೋಹದ ಅಡಿ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಅಪೌಷ್ಟಿಕ ಆಹಾರ ನೀಡಲಾಗುತ್ತಿದೆ. ನಿಯಮಾನುಸಾರ ತರಕಾರಿ, ಬೆಳೆಕಾಳು ಬಳಕೆ ಮಾಡದೇ ಪ್ರತ್ಯೇಕವಾಗಿ ಗಟ್ಟಿಸಾರು ಮತ್ತು ತಿಳಿಸಾರು ತಯಾರಿಸಿ ನೀಡುತ್ತಿರುವ ಪ್ರಕರಣಗಳು ಭೇಟಿ ನೀಡಿದ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕೆಂಬ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದ್ದು, ದುರ್ಬಳಕೆ ಮಾಡುವುದು ಸರಿಯಲ್ಲ. ಆಯಾ ತಾಲ್ಲೂಕಿನ ಶಿಕ್ಷಣಾಧಿಕಾರಿಗಳು ಪ್ರತಿದಿನ 10ರಿಂದ 15 ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಡಿಡಿಪಿಐಗೆ ಸೂಚಿಸಿದರು.

ಹೋಲ್‌ಸೇಲ್‌ನಿಂದ ರೀಟೈಲ್‌ಗಳಿಗೆ ತಲುಪುವ ಮಾರ್ಗದಲ್ಲಿ ಆಹಾರಧಾನ್ಯ ಬೇರೆ ಕಡೆಗೆ ಸಾಗಿಸುವ ಪ್ರಕರಣ ಬೆಳಕಿಗೆ ಬಂದಿವೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ನಿಗಾ ವಹಿಸಿ ತಪ್ಪಿಸ್ಥರ ವಿರುದ್ಧ ಇಸಿ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ಜಿ.ಪಂ. ಸಿಇಓ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹೋಬಳಿ ಮೇಲ್ವಿಚಾರಕರು ಅಂಗನವಾಡಿ ಕೇಂದ್ರಗಳಿಗೆ ವರ್ಷಕ್ಕೊಮ್ಮೆ ಭೇಟಿ ನೀಡದೇ, ಪ್ರತಿ ಎರಡು ವಾರಕ್ಕೊಮ್ಮೆಯಾದರೂ ಭೇಟಿ ನೀಡಿ ವ್ಯವಸ್ಥಿವಾಗಿ ಕಾರ್ಯನಿರ್ವಹಿಸಲು ಸಲಹೆ ನೀಡಬೇಕು ಎಂದು ಅಧಿಕಾರಿಗೆ ಹೇಳಿದರು.

ಜನಪ್ರತಿನಿಧಿಗಳ ಗೈರು: ಕೆಡಿಪಿ ಮಾಸಿಕ ಸಭೆಯಲ್ಲಿ ಜಿ.ಪಂ. ಸ್ಥಾಯಿ ಸಮಿತಿಗಳ ಅಧ್ಯಕ್ಷರು ಗೈರು ಹಾಜರಾಗಿದ್ದರು. ಜಿ.ಪಂ. ಮುಖ್ಯ ಯೋಜನಾಧಿಕಾರಿ ಚಂದ್ರಪ್ಪ ಸ್ವಾಗತಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.