ADVERTISEMENT

ನೆಲ್ಲಿಗೆ ಕುಸಿದ ಬೇಡಿಕೆ: ಸಂಕಷ್ಟದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 6:50 IST
Last Updated 13 ಮಾರ್ಚ್ 2012, 6:50 IST

ಹಿರಿಯೂರು: ಔಷಧಿಗೆ ಉಪಯುಕ್ತವಾದುದು ನೆಲ್ಲಿ. ಬೆಳೆದರೆ ಕೈತುಂಬಾ ಹಣ ಸಿಗುತ್ತದೆ. ನಷ್ಟದ ಮಾತೇ ಇಲ್ಲ. ನೀರು ಕಡಿಮೆ ಇದ್ದರೂ ಬೆಳೆಯಬಹುದು ಎಂದು ಹೇಳಿದವರ ಮಾತು ಕೇಳಿ ನೆಲ್ಲಿ ಬೆಳೆದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನ ದಿಂಡಾವರ ರಸ್ತೆಯಲ್ಲಿ ಗಾಂಧಿನಗರ ಗ್ರಾಮದ ಸಮೀಪ ಇರುವ ಚಕ್ರತೀರ್ಥ ಉಮೇಶ್ ಎಂಬ ರೈತರು ತಮ್ಮ ತೋಟದಲ್ಲಿ ಮಾವು, ಸಪೋಟ ಜತೆಗೆ ಒಂದು ಭಾಗದಲ್ಲಿ ಕಾಂಚನ, ಕೃಷ್ಣ ಮತ್ತು ಬನಾರಸ್ ತಳಿಯ ಸುಮಾರು 1,600 ನೆಲ್ಲಿ ಗಿಡ ನಾಟಿ ಮಾಡಿದ್ದಾರೆ. ಹತ್ತು ವರ್ಷದಿಂದ ಬೆಳೆ ತೆಗೆಯುತ್ತಿದ್ದರೂ ಲಾಭದ ಮಾತಿರಲಿ, ಖರ್ಚು ಮಾಡುತ್ತಿರುವ ಹಣವೂ ಕೈಗೆ ಬಂದಿಲ್ಲ.
 
40 ಟನ್‌ವರೆಗೆ ನೆಲ್ಲಿ ಉತ್ಪಾದನೆ ಆಗುತ್ತಿದ್ದರೂ ನಿರೀಕ್ಷೆಗೆ ತಕ್ಕಂತೆ ಬೆಲೆ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ರೂ.40-50 ಕೆಜಿಯಂತೆ ನೆಲ್ಲಿ ಮಾರಲಾಗುತ್ತಿದೆ. ಆದರೆ , ಗುತ್ತಿಗೆದಾರರು ಮಾರುಕಟ್ಟೆ ದರದಲ್ಲಿ ಅರ್ಧ ಬೆಲೆಗೂ ನೆಲ್ಲಿಯನ್ನು ಖರೀದಿಸುತ್ತಿಲ್ಲ ಎನ್ನುವುದು ಉಮೇಶ್ ಅನುಭವದ ಮಾತು.

ಕೇರಳದಲ್ಲಿ ಔಷಧಿ ತಯಾರಿಸುವ ಕಂಪೆನಿಗಳಿವೆ. ಅಲ್ಲಿ ಪ್ರತಿ ಕೆ.ಜಿ.ಗೆ ್ಙ 20-25 ನೀಡಿ ಖರೀದಿಸುತ್ತಾರೆ ಎಂಬ ಮಾಹಿತಿ ಇದೆ. ಆದರೆ, ನೆಲ್ಲಿಯನ್ನು ಹೊರ ರಾಜ್ಯಗಳಿಗೆ ಕಳುಹಿಸಲು ಗಡಿಯಲ್ಲಿರುವ ಚೆಕ್ ಪೋಸ್ಟ್‌ಗಳಲ್ಲಿ ತಗಾದೆ ಮಾಡುತ್ತಾರೆ. ಅರಣ್ಯ ಇಲಾಖೆ ಅನುಮತಿ ಇದೆಯೆ ಎಂದು ಪ್ರಶ್ನೆ ಮಾಡುತ್ತಾರೆ. ನೆಲ್ಲಿ ತೆಗೆದುಕೊಂಡು ಹೋಗುವ ಪ್ರತಿ ಲೋಡ್‌ಗೂ ಇಲಾಖೆ ಅನುಮತಿ ಪಡೆಯಬೇಕು. ಇದಕ್ಕಾಗಿ ಇಲಾಖೆಗೆ ಐದಾರು ಬಾರಿ ತಿರುಗಬೇಕು. ಅಧಿಕಾರಿಗಳು ಸಿಗದಿದ್ದರೆ, ಕಿತ್ತ ನೆಲ್ಲಿ ಹೊಲದಲ್ಲಿಯೆ ಬಾಡಿ ಹೋಗುತ್ತದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಕಣ್ಣೆದುರು ಫಸಲು ಬಾಡುತ್ತಿದ್ದರೆ ಬೇಸರವಾಗುತ್ತದೆ. ತೋಟಗಾರಿಕೆ ಇಲಾಖೆ ಉಚಿತವಾಗಿ ನೆಲ್ಲಿ ಸಸಿಗಳನ್ನು ಕೊಟ್ಟರೂ ಮಾರುಕಟ್ಟೆ ಸಮಸ್ಯೆಯಿಂದ ತೆಗೆದುಕೊಂಡು ಹೋಗುವವರು ಕಡಿಮೆ. ಸರ್ಕಾರ ನೆಲ್ಲಿ ಬೆಳೆಗಾರರ ನೆರವಿಗೆ ಬರಬೇಕು. ಹೊರ ರಾಜ್ಯಗಳಿಗೆ ನೆಲ್ಲಿ ಮಾರಾಟ ಮಾಡಲು ಮುಕ್ತ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.