ಚಳ್ಳಕೆರೆ: ‘ಜೀವವನ್ನು ಉಳಿಸಬೇಕಾದ ಸರ್ಕಾರಿ ಆಸ್ಪತ್ರೆ ಪ್ರಸಕ್ತ ದಿನಗಳಲ್ಲಿ ಜನರ ಪ್ರಾಣ ತೆಗೆಯುವ ಸ್ಥಳವಾಗಿ ಮಾರ್ಪಟ್ಟಿದೆ’ ಎಂದು ಕರವೇ ಕಾರ್ಯಕರ್ತರು (ಪ್ರವೀಣ್ ಶೆಟ್ಟಿ ಬಣ) ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಾಲ್ಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ಅವರು ಆಸ್ಪತ್ರೆಯ ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ ನೀರಿನ ತೊಟ್ಟಿ ಮುಚ್ಚಿರದ ಕಾರಣ, ಕೊಂಡ್ಲಹಳ್ಳಿ ಗ್ರಾಮದ ಆಂಜಿನಮ್ಮ, ಶಿವಣ್ಣ ದಂಪತಿಯ 5 ವರ್ಷದ ಮಗು ನ. 28ರಂದು ನೀರಿನ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟಿದೆ.
ದುರ್ಘಟನೆಗೆ ಆಸ್ಪತ್ರೆಯ ಅಧಿಕಾರಿಗಳು ಸಂಪೂರ್ಣ ಜವಾಬ್ದಾರಿ ಹೊತ್ತು ಮಗುವನ್ನು ಕಳೆದುಕೊಂಡಿರುವ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ, ಕಾರ್ಯಕರ್ತರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಆಸ್ಪತ್ರೆಗೆ ಬರುವ ಗ್ರಾಮೀಣ ಭಾಗದ ರೋಗಿಗಳಿಗೆ ಇಲ್ಲಿ ಸುರಕ್ಷಿತ ವಾತವರಣವಿಲ್ಲ.
ಬಡರೋಗಿಗಳಿಗೆ ವೈದ್ಯರಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿದ ಅವರು, ಮಗುವಿನ ಸಾವಿಗೆ ಕಾರಣರಾದ ಆಸ್ಪತ್ರೆ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಂಡು ಮಗುವಿನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ತಹಶೀಲ್ದಾರ್ ಎಚ್.ವಿ.ವಿಜಯರಾಜು ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕರವೇ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಹಾಯ್ಕಲ್ ವಿರೂಪಾಕ್ಷ, ಟಿ.ಕಣುಮೇಶ್, ರಂಗನಾಥ, ಸುರೇಶ, ಪಿ.ಮಂಜುನಾಥ, ಸಿ.ರವಿಕುಮಾರ್, ರುದ್ರೇಶ್, ವೀರೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.