ADVERTISEMENT

ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 5:55 IST
Last Updated 2 ಜೂನ್ 2011, 5:55 IST

ಚಿತ್ರದುರ್ಗ: ದಾವಣಗೆರೆ-ಚಿತ್ರದುರ್ಗ ಜಿಲ್ಲೆಯನ್ನು ಸೇರಿಸಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ರೇವಣಸಿದ್ದಪ್ಪತಿಳಿಸಿದರು.

ನಗರದ ಸರ್ಕಾರಿ ಪ್ರೌಢಶಾಲೆ(ಕೋಟೆ)ಯಲ್ಲಿ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಶಿವಮೊಗ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ವಿದ್ಯಾರ್ಥಿಗಳಿಗೆ ಹಾಲು ವಿತರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸುಮಾರು ್ಙ 23 ಕೋಟಿ ಅಂದಾಜು ವೆಚ್ಚದಲ್ಲಿ ಪ್ರತ್ಯೇಕ ಒಕ್ಕೂಟ ಸ್ಥಾಪಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಇನ್ನೆರಡು ವರ್ಷಗಳಲ್ಲಿ ಒಕ್ಕೂಟ ಕಾರ್ಯಾಚರಣೆ ಆರಂಭಿಸುವ  ನಿರೀಕ್ಷೆಯಿದೆ ಎಂದು ನುಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ್ಙ 1.42 ಕೋಟಿ ವೆಚ್ಚದಲ್ಲಿ ಮೇವು ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಐನಹಳ್ಳಿ ಹತ್ತಿರ 5 ಎಕರೆ ಜಮೀನು ಗುರುತಿಸಲಾಗಿದೆ. ಮೇವು ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಟೆಂಡರ್ ಸಹ ಕರೆಯಲಾಗಿದೆ. ಮೆಕ್ಕೆಜೋಳದ ದಂಟು ಮುಂತಾದ ವಸ್ತುಗಳನ್ನು ಸೇರಿಸಿ ಮೇವು ತಯಾರಿಸಲಾಗುತ್ತದೆ ಎಂದು ವಿವರಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲಿನ 160 ಹಾಲು ಉತ್ಪಾದಕ ಸಹಕಾರ ಸಂಘಗಳಿಂದ ಪ್ರತಿದಿನ 40 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಜಿಲ್ಲೆಯಲ್ಲಿ 27 ಸಾವಿರ ಪ್ಯಾಕೇಟ್ ಮಾರಾಟವಾಗುತ್ತಿದೆ. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲ್ಲೂಕುಗಳಿಂದ ಹಾಲು ಉತ್ಪಾದನೆಯ ಪ್ರಮಾಣ ಹೆಚ್ಚಾಗಿದ್ದರೆ, ಹೊಳಲ್ಕೆರೆಯಲ್ಲಿ ಕುಂಠಿತವಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹಲವು ಸಂಘಗಳು ಮುಚ್ಚಿವೆ. ರೈತರು ನಿರಾಸಕ್ತಿ ತೋರುತ್ತಿರುವುದು ಇದಕ್ಕೆ ಕಾರಣ. ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ಎರಡು ರೂಪಾಯಿ ಸಹಾಯಧನ ನೀಡಿ ಉತ್ತೇಜನ ನೀಡಿದೆ. ರಾಜ್ಯದಲ್ಲಿ ್ಙ 618 ಕೋಟಿ ಸಹಾಯಧನ ನೀಡಲಾಗಿದೆ. ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಹೈನುಗಾರಿಕೆ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಹಾಲು ಉತ್ಪಾದನೆ ಚಟುವಟಿಕೆಗೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ಯಾಕಿಂಗ್ ಘಟಕ ಸ್ಥಾಪಿಸಲು ್ಙ 4 ಕೋಟಿ ಮೊತ್ತದ ಯೋಜನೆಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಶಿವಮೊಗ್ಗ ಒಕ್ಕೂಟದ ವ್ಯಾಪ್ತಿಯಲ್ಲಿ 801 ಕಾರ್ಯನಿರತ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ದಿನವೊಂದಕ್ಕೆ 2.25 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ಈ ರೀತಿ ಸಂಗ್ರಹಿಸಿದ ಹಾಲನ್ನು ಅತ್ಯಾಧುನಿಕ ಡೈರಿಗಳಲ್ಲಿ ವೈಜ್ಞಾನಿಕವಾಗಿ ಸಂಗ್ರಹಿಸಿ, ಪಾಶ್ಚೀಕರಿಸಿ 815 ಹಾಲಿನ ಡೀಲರ್‌ಗಳು ಹಾಗೂ 19 ಮಿಲ್ಕ್ ಪಾರ್ಲರ್ ಡಿಪೋಗಳ ಮೂಲಕ ದಾವಣಗೆರೆ- ಚಿತ್ರದುರ್ಗ- ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯ ನಗರ ಮತ್ತು ಪಟ್ಟಣಗಳಿಗೆ ದಿನವೊಂದಕ್ಕೆ 1.6 ಲಕ್ಷ ಲೀಟರ್ ಪೂರೈಸಲಾಗುತ್ತದೆ ಎಂದು ವಿವರಿಸಿದರು.

ಹೆಚ್ಚಿನ ಬೆಲೆಗೆ ನಂದಿನಿ ಹಾಲನ್ನು ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಕೆಲವರು ಬೆಳಗಿನ ಜಾವದಲ್ಲೇ ಗ್ರಾಹಕರಿಗೆ ಮಾರಾಟ ಮಾಡುವ ಬದಲು ಅಂಗಡಿಗಳಿಗೆ ಮಾರಾಟ ಮಾಡುತ್ತಿ ದ್ದಾರೆ. ಈಗಾಗಲೇ ಗ್ರಾಹಕರ ಅನುಕೂಲಕ್ಕಾಗಿ ಹಾಲು ಮಾರಾಟಕ್ಕೆ ನಗರದಲ್ಲಿ ಎರಡು ಎಟಿಎಂ ಪಾರ್ಲರ್‌ಗಳನ್ನು ತೆರೆಯಲಾಗಿದೆ. ಶೀಘ್ರದಲ್ಲಿ ಇನ್ನೆರೆಡು ಎಟಿಎಂ ಪಾರ್ಲರ್‌ಗಳನ್ನು ಆರಂಭಿ ಸಲಾಗುವುದು ಎಂದು ವಿವರಿಸಿದರು. ವಿದರ್ಭ ಪ್ಯಾಕೇಜ್ ಅಡಿಯಲ್ಲಿ ಎರಡು ವರ್ಷದಲ್ಲಿ 2 ಸಾವಿರ ಹಸುಗಳನ್ನು ವಿತರಿಸಲಾಗಿದ್ದು, ಯಶಸ್ವಿಯಾಗಿ ಹೈನುಗಾರಿಕೆ ಚಟುವಟಿಕೆಗಳು ನಡೆದಿವೆ.

ಆದರೆ, 3ನೇ ವರ್ಷದಲ್ಲಿ ಈ ಯೋಜನೆಯನ್ನು ಪಶು ಸಂಗೋಪನಾ ಇಲಾಖೆಗೆ ವಹಿಸಿದ ನಂತರ ವಿಫಲವಾಗಿದೆ ಎಂದು ನುಡಿದರು. ಕೋಟೆ ಶಾಲೆ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಹಾಗೂ ಒಕ್ಕೂಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.