ಹೊಸದುರ್ಗ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಕೆಎಸ್ಆರ್ಟಿಸಿ ಬಸ್ ಸೇವೆ ಅಸ್ತವ್ಯಸ್ತ ಆಗಿದ್ದರಿಂದ ಪಟ್ಟಣದಲ್ಲಿ ಪ್ರಯಾಣಿಕರು ಬಸ್ಗೆ ಪರದಾಡಿದರು.
‘ಶ್ರೀರಾಂಪುರ, ಹುಳಿಯಾರು, ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಸಂಚರಿಸುವವರು ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಒಂದು ತಾಸು ಕಾದರೂ ಬಸ್ ಬಂದಿಲ್ಲ. ಬೆಂಗಳೂರಿನಿಂದ ಬಂದು ವಾಪಸ್ ಹೋಗುವಾಗ
ಇಲ್ಲಿ ಬಿಟ್ಟರೆ ಬೆಂಗಳೂರಿನಲ್ಲಿ ಮಾತ್ರ ನಿಲುಗಡೆ. ಮಧ್ಯೆ ಎಲ್ಲಿಯೂ ನಿಲ್ಲಿಸುವುದಿಲ್ಲ ಎಂದು ಬಸ್ ನಿರ್ವಾಹಕರು ಹೇಳುತ್ತಿದ್ದರು. ಹೊಸದುರ್ಗದಿಂದ ಹೋಗಿ 25 ಕಿ.ಮೀ. ದೂರದ ಶ್ರೀರಾಂಪುರದಲ್ಲಿ ಇಳಿದರೂ ಬೆಂಗಳೂರು ಬಸ್ ಚಾರ್ಜ್ (₹ 150) ಕೊಡಬೇಕು ಎಂದು ಕೇಳುತ್ತಿದ್ದರು. ₹25 ರ ಬದಲು ₹150 ಏಕೆ ಕೊಡಬೇಕು ಎಂದು ತಿಳಿಯುತ್ತಿಲ್ಲ’ ಎಂದು ಪ್ರಯಾಣಿಕ ನಾಗೇಂದ್ರ ಪ್ರಶ್ನಿಸಿದರು.
‘ಬಸ್ ದರ ಏರಿಕೆ ಬಗ್ಗೆ ಘಟಕದ ವ್ಯವಸ್ಥಾಪಕರನ್ನು ಕೇಳಲು ಅವರು ಸಿಗುತ್ತಿಲ್ಲ. ವಿಧಾನಸಭೆ ಚುನಾವಣೆ ಇರುವುದರಿಂದ ಬಸ್ ಸೇವೆ ಕೆಲವೆಡೆ ವ್ಯತ್ಯಯವಾಗುತ್ತದೆ. ಪ್ರಯಾಣಿಕರು ಸಹಕರಿಸಬೇಕು ಎಂದು ಬೋರ್ಡ್ ಹಾಕಿದ್ದಾರೆ.
ಒಂದು ತಾಸಿನಿಂದ ಕಾಯುತ್ತಿದ್ದೇನೆ ಏನು ಮಾಡಬೇಕೋ ಎಂದು ತಿಳಿಯುತ್ತಿಲ್ಲ’ ಎಂದು ಶ್ರೀರಾಂಪುರದ ರೇಣುಕಮ್ಮ ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.