ADVERTISEMENT

ಬಾಕಿ ಸಾಲ ವಸೂಲಾತಿಗೆ ಸದಸ್ಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 11:00 IST
Last Updated 1 ಅಕ್ಟೋಬರ್ 2011, 11:00 IST

ಹಿರಿಯೂರು: ಬ್ಯಾಂಕಿನಿಂದ ಸಾಲ ಪಡೆದು, ಏನೂ ತಿಳಿಯದವರಂತೆ ಅಡ್ಡಾಡಿಕೊಂಡಿರುವ ವ್ಯಕ್ತಿಗಳಿಂದ ಸಾಲ ವಸೂಲು ಮಾಡಬೇಕು ಎಂದು ನಗರದ ವಾಸವಿ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅರ್ಬನ್ ಸಹಕಾರಿ ಬ್ಯಾಂಕಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಆರ್. ಮೊಹಮ್ಮದ್ ರಫೀ ಅವರು, ಪ್ರಸ್ತುತ ಸಾಲಿನಲ್ಲಿ ಎನ್‌ಪಿಎ ಸಾಲ ಸೇರಿದಂತೆ ರೂ. 2.85 ಕೋಟಿ ಸಾಲ ವಸೂಲಿ ಮಾಡಲಾಗಿದೆ. ಬ್ಯಾಂಕಿನಲ್ಲಿ ಇ-ಸ್ಟಾಂಪಿಂಗ್ ವ್ಯವಸ್ಥೆ ಜಾರಿಗೆ ತಂದಿದ್ದು, ಸಂಜೆ 4ರವರೆಗೆ ಗ್ರಾಹಕರಿಗೆ ಛಾಪಾ ಕಾಗದ ಕೊಡಲಾಗುತ್ತಿದೆ.
ಹಿಂದಿನ ಜುಲೈ ತಿಂಗಳಿಂದ ಆರ್‌ಟಿಜಿಎಸ್-ನೆಫ್ಟ್ ಸೇವೆ ಆರಂಭಿಸಲಾಗಿದೆ. ಅತೀ ಕಡಿಮೆ ಶುಲ್ಕದಲ್ಲಿ ಆಕ್ಸಿಸ್ ಬ್ಯಾಂಕಿನ ಸಹಕಾರದಿಂದ ಹಣ ವರ್ಗಾವಣೆ ಸೌಲಭ್ಯ ಜಾರಿಗೊಳಿಸಲಾಗಿದೆ. ಸಾಲಗಾರರಿಂದ ಇನ್ನೂ ರೂ. 3.72 ಕೋಟಿ ಬಡ್ಡಿ ವಸೂಲಾತಿ ಬಾಕಿ ಇದ್ದು, ಬರುವ ಮಾರ್ಚ್ ಅಂತ್ಯದೊಳಗೆ ರೂ. 2 ಕೋಟಿ ವಸೂಲಿ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ 7,111 ಸದಸ್ಯರಿದ್ದು, ರೂ. 90.75 ಲಕ್ಷ ಷೇರು ಬಂಡವಾಳ ಹೊಂದಿದೆ. ರೂ. 70 ಲಕ್ಷ ಹೊಸ ಠೇವಣಿ ಸಂಗ್ರಹಿಸಿರುವ ಬ್ಯಾಂಕು ರೂ. 1.75 ಕೋಟಿ ಹೊಸ ಸಾಲ ಮಂಜೂರು ಮಾಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿನ ತೀವ್ರ ಪೈಪೋಟಿಯ ನಡುವೆಯೂ ಪ್ರಸ್ತುತ ಸಾಲಿನಲ್ಲಿ ರೂ. 47.74 ಲಕ್ಷ  ಲಾಭ ಗಳಿಸಿದೆ. ಸದಸ್ಯರು ಒತ್ತಾಯಿಸಿರುವಂತೆ ಸಾಲ ವಸೂಲಾತಿಯನ್ನು ತೀವ್ರಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಬ್ಯಾಂಕಿನಲ್ಲಿ ಒಟ್ಟಾರೆ ರೂ. 5.18 ಕೋಟಿ ಠೇವಣಿ ಇದ್ದು, 5,000 ಮುಖಬೆಲೆಯ ಅಕ್ಷಯ ಕ್ಯಾಷ್ ಸರ್ಟಿಫಿಕೇಟ್ ಠೇವಣಿಯನ್ನು ಬಿಡುಗಡೆ ಮಾಡಿದ್ದು, ಕೇವಲ ಆರೂವರೆ ವರ್ಷದಲ್ಲಿ ಠೇವಣಿದಾರರ ಹಣ ದ್ವಿಗುಣಗೊಳ್ಳುತ್ತದೆ. ಈ ಯೋಜನೆಯಲ್ಲಿ ರೂ. 1.5 ರಿಂದ ರೂ. 2 ಕೋಟಿ ಠೇವಣಿ ಸಂಗ್ರಹಿಸುವ ಗುರಿಯಿದೆ. ಬರುವ ಮಾರ್ಚ್ ವೇಳೆಗೆ ರೂ. 3 ಕೋಟಿ ಸಾಲ ನೀಡಬೇಕೆಂಬ ಉದ್ದೇಶ ಆಡಳಿತ ಮಂಡಳಿಯದ್ದು ಎಂದು ರಫೀಕ್ ತಿಳಿಸಿದರು.

ಉಪಾಧ್ಯಕ್ಷೆ ಲಕ್ಷ್ಮೀ ಆರ್ ಶೆಟ್ಟಿ, ದೊರೆಸ್ವಾಮಿ ಖಂಡರ್, ಕೆ.ಆರ್. ವೆಂಕಟೇಶ್, ವೈ.ಎಸ್. ಅಶ್ವತ್ಥಕುಮಾರ್, ಬಿ.ವಿ. ಮಾಧವ, ಆರ್, ವಸಂತಕುಮಾರ್, ಬಿ. ಸುಧಾಕರ್, ಆರ್. ಶಿವಕುಮಾರ್, ಸಿ. ಸಿದ್ದರಾಮಣ್ಣ, ಎಚ್.ಎಸ್. ಸಿದ್ದನಾಯಕ, ವಿ.ಎಂ. ಗೌರಿಶಂಕರ್, ವಿ.ಎಚ್. ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.