ADVERTISEMENT

ಭಾಷೆಗಳು ದೇಶದ ಸಂಸ್ಕೃತಿಯ ಪ್ರತೀಕ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 5:10 IST
Last Updated 15 ಸೆಪ್ಟೆಂಬರ್ 2011, 5:10 IST

ಹೊಳಲ್ಕೆರೆ: ಭಾಷೆಗಳು ದೇಶದ ಸಂಸ್ಕೃತಿಯ ಪ್ರತೀಕ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸರ್ಕಾರದ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ಶಿಕ್ಷಕರ ಸದನದಲ್ಲಿ ಬುಧವಾರ ನಡೆದ ಹಿಂದಿ ದಿವಸ್, ಜಿಲ್ಲಾ ಹಿಂದಿ ಭಾಷಾ ಶಿಕ್ಷಕರ ಕಾರ್ಯಾಗಾರ ಹಾಗೂ ಟಿಎಲ್‌ಎಂ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿ ನಮ್ಮ ದೇಶದ ಸಂಪರ್ಕ ಭಾಷೆಯಾಗಿದ್ದು, ಪುರಾತನ ಇತಿಹಾಸ ಹೊಂದಿದೆ. ದೇಶದಲ್ಲಿ ಅತಿ ಹೆಚ್ಚು ಜನ ಮಾತನಾಡುವ ಈ ಜೀವಭಾಷೆ ಈಚೆಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ನಗರಗಳಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿದ್ದು, ಪ್ರತಿಯೊಂದಕ್ಕೂ ವಿದೇಶಿ ಭಾಷೆಯ ಬಳಕೆ ಆಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವ್ಯಾಪಾರ, ವಹಿವಾಟು, ಶಾಲಾ-ಕಾಲೇಜುಗಳು ಮತ್ತು ಆಡಳಿತದಲ್ಲಿಯೂ, ಇಂಗ್ಲಿಷ್ ಹೆಚ್ಚು ಬಳಕೆಯಾಗುತ್ತಿದೆ. ಇಂಗ್ಲಿಷ್ ಬರದಿದ್ದರೆ ಜೀವನವೇ ನಡೆಯುವುದಿಲ್ಲ ಎಂಬ ಭಾವವೂ ನಮ್ಮದಾಗುತ್ತಿದೆ.

ಆದರೆ ನಮ್ಮದೇ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದ್ದು, ಹಿಂದಿ ಭಾಷೆಯ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಸ್.ಜೆ. ರಂಗಸ್ವಾಮಿ ಮಾತನಾಡಿ, ನಮ್ಮ ದೇಶದ ಭಾಷೆಯನ್ನು ಎಲ್ಲರೂ ಪ್ರೀತಿಸಬೇಕು. ದೇಶ ಭಾಷೆಯಾದ ಹಿಂದಿಯ ಪರಿಚಯ ಪ್ರತಿಯೊಬ್ಬ ಭಾರತೀಯನಿಗೂ ಇರಬೇಕು ಎಂದರು.

ಡಿಡಿಪಿಐ ಎಚ್. ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿ ಭಾಷಾ ಶಿಕ್ಷಕರು ಆಗಾಗ ಇಂತಹ ಕಾರ್ಯಾಗಾರ ಏರ್ಪಡಿಸುವುದರಿಂದ ಭಾಷಾಭಿಮಾನ ಬೆಳೆಸಬಹುದು. ಕಲಿಕಾ ಸಾಮಗ್ರಿ ಮೇಳಗಳನ್ನು ನಡೆಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪಿ.ಆರ್. ಶಿವಕುಮಾರ್, ಭಾರತೀ ಕಲ್ಲೇಶ್, ವಿದ್ಯಾಧಿಕಾರಿ ಎಸ್.ಕೆ.ಬಿ. ಪ್ರಸಾದ್, ರಮೇಶ್, ಬಿಇಒಎಸ್.ಆರ್. ಮಂಜುನಾಥ್, ಯೋಗೀಶ್, ರಾಜಣ್ಣ, ಹಿಂದಿ ಭಾಷಾ ಶಿಕ್ಷಕರ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಮಂಜಾನಾಯ್ಕ, ತಾಲ್ಲೂಕು ಅಧ್ಯಕ್ಷ ಬಿ.ಕೆ. ಮಾಧವ, ಓಂಕಾರಪ್ಪ, ಎನ್.ಜಿ. ಚಂದಯ್ಯ, ಪಂಚಾಕ್ಷರಪ್ಪ, ಜಯಕುಮಾರ್, ಜೆ. ರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.