ADVERTISEMENT

ಭೂ ಹಕ್ಕುಪತ್ರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 6:25 IST
Last Updated 18 ಮಾರ್ಚ್ 2011, 6:25 IST
ಭೂ ಹಕ್ಕುಪತ್ರಕ್ಕೆ ಒತ್ತಾಯ
ಭೂ ಹಕ್ಕುಪತ್ರಕ್ಕೆ ಒತ್ತಾಯ   

ಚಿತ್ರದುರ್ಗ: ಜಿಲ್ಲೆಯ ಬಗರ್‌ಹುಕುಂ ಸಾಗುವಳಿ ರೈತರಿಗೆ ಭೂಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಧರಣಿ ನಡೆಸಿದರು.ವಂದನಾ ಸಂಸ್ಥೆ, ಕರ್ನಾಟಕ ಭೂ ಹಕ್ಕುದಾರರ ವೇದಿಕೆ, ಸ್ಪಿನ್ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ, ರೈತ ಸಂಘ, ಜನಮುಖಿ ಸಂಘಟನೆ ನೇತೃತ್ವದಲ್ಲಿ ಧರಣಿ ನಡೆಯಿತು.

ಧರಣಿಗೂ ಮುನ್ನ ನಗರದಲ್ಲಿ ಬೇಡಿಕೆ ಈಡೇರಿಸುವಂತೆ ಪದಾಧಿಕಾರಿಗಳು ರ್ಯಾಲಿ ನಡೆಸಿದರು.ರಾಜ್ಯದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಹಲವು ವರ್ಷಗಳಿಂದ ಬಗರ್‌ಹುಕುಂ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಬಗರ್‌ಹುಕುಂ ಸಾಗುವಳಿದಾರರ 60,742 ಅರ್ಜಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಸರ್ಕಾರ ಹಕ್ಕುಪತ್ರ ನೀಡಿಲ್ಲ ಎಂದು ಮುಖಂಡರು ದೂರಿದರು.

ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕು ನೀಡಬೇಕು ಎಂದು ರಾಜ್ಯ ಸರ್ಕಾರ ಪ್ರತಿ ತಾಲ್ಲೂಕಿನಲ್ಲಿ ‘ಲ್ಯಾಂಡ್ ಗ್ರ್ಯಾಂಟ್’ ಸಮಿತಿಗಳನ್ನು ರಚಿಸಿದ್ದು, ಮುಂಬರುವ 6 ತಿಂಗಳ ಒಳಗೆ ಭೂಮಿ ಹಂಚಿಕೆ ಮಾಡಿ ಹಕ್ಕುಪತ್ರ ನೀಡಲು ಆದೇಶಿಸಿದೆ. ಜತೆಗೆ ರಾಜ್ಯ ಸರ್ಕಾರ ಈಗಾಗಲೇ 4 ಲಕ್ಷ ಎಕರೆ ಭೂಮಿಯನ್ನು 2.20 ಲಕ್ಷ ಕುಟುಂಬಗಳಿಗೆ 6 ತಿಂಗಳ ಒಳಗಾಗಿ ಭೂಮಿ ಹಂಚಿಕೆ ಮಾಡುವಂತೆ ಸೂಚಿಸಿದೆ. ಆದರೂ ಇನ್ನೂ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ದೂರಿದರು.

ಬಗರ್‌ಹುಕುಂ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನವನ್ನು ಅರಣ್ಯ ಇಲಾಖೆ ನಿಲ್ಲಿಸಿ 6 ತಿಂಗಳ ಒಳಗೆ ಭೂಮಿ ಹಂಚಬೇಕು ಎಂದು ಒತ್ತಾಯಿಸಿದರು.ವಂದನಾ ಸಂಸ್ಥೆಯ ನಿರ್ದೇಶಕ ಡಿ. ಕೃಷ್ಣನಾಯ್ಕ, ಎನ್. ವೆಳ್ಳಿಯನ್‌ಗಿರಿ, ರೈತ ಸಂಘದ ಮುಖಂಡ ಈಚಘಟ್ಟ ಸಿದ್ದವೀರಪ್ಪ, ಭೀಮನಕೆರೆ ಶಿವಮೂರ್ತಿ, ಪಿ. ಬೋರಯ್ಯ, ನರೇನಹಳ್ಳಿ ಅರುಣಕುಮಾರ್, ತಿಮ್ಮಪ್ಪಯ್ಯನಹಳ್ಳಿ ರಾಜಣ್ಣ, ಪಟೇಲ್ ಜಿ. ಪಾಪನಾಯಕ, ಮಲ್ಲೇಶ್, ಕೆ ತಿಪ್ಪೇಸ್ವಾಮಿ, ಧರ್ಮನಾಯ್ಕ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.