ADVERTISEMENT

ಭ್ರಷ್ಟಾಚಾರದಿಂದ ಆಡಳಿತ ಕುಸಿತ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 7:30 IST
Last Updated 23 ಜನವರಿ 2012, 7:30 IST

ಚಿತ್ರದುರ್ಗ: ಭ್ರಷ್ಟಾಚಾರ ಅವ್ಯಾಹತವಾಗಿ ಇದೇ ರೀತಿ ಮುಂದುವರಿದರೆ ಆಡಳಿತ ವ್ಯವಸ್ಥೆಯೇ ಕುಸಿದು ಬೀಳಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಮಹಾದೇವ ಬಿದರಿ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಅಭಿನಂದನಾ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ಕ್ಯಾನ್ಸರ್ ಇದ್ದಂತೆ. ಅದು ದೇಶವನ್ನು ಹಾಳು ಮಾಡುತ್ತದೆ.  ಭ್ರಷ್ಟಾಚಾರಕ್ಕೆ ಕೊನೆ ಇಲ್ಲ. ಆದರೆ, ನಿಯಂತ್ರಿಸಬೇಕಾಗಿದೆ. ಭ್ರಷ್ಟಾಚಾರವನ್ನು ಕೊನೆಗೊಳಿಸಲು ಎಲ್ಲರೂ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ನುಡಿದರು.

ನಮ್ಮ  ಪೂರ್ವಜರು ಶ್ರಮವಹಿಸಿ ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಿದ್ದಾರೆ. ಆದರೆ, ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಅನುಮಾನ ಕಾಡುತ್ತಿದೆ. ಪ್ರಸ್ತುತ ಸ್ಥಿತಿ ಮುಂದುವರಿದರೆ ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ಆಡಳಿತ ವ್ಯವಸ್ಥೆ ಕುಸಿದು ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂದು ಹಣ ಮಾಡುತ್ತಿರುವವರು ಮೂರ‌್ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡುತ್ತಿದ್ದಾರೆ. ಈಗಿನವರು ಹಣ ಮಾಡುತ್ತಿರುವುದನ್ನು ನೋಡಿದರೆ ಮುಂದಿನ ಪೀಳಿಗೆಯಲ್ಲಿ ಹುಟ್ಟುವವರು ಕುರುಡರು, ಕುಂಟರಾಗಿ ಹುಟ್ಟುತ್ತಾರೆಯೇ ಎನ್ನುವ ಆತಂಕವಿದೆಯೇ. ಮುಂದಿನ ಪೀಳಿಗೆಯವರು ಶ್ರಮ ವಹಿಸದೆ, ದುಡಿಯದೆ ಬದುಕಬೇಕೆ ಎಂದು ಪ್ರಶ್ನಿಸಿದರು.

ರಾಜ್ಯಸಭೆ ಮಾಜಿ ಸದಸ್ಯ ಎಚ್. ಹನುಮಂತಪ್ಪ ಅವರು, ಶಂಕರ್ ಬಿದರಿ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ಬರಬೇಕು ಎಂದು ಸಲಹೆ ನೀಡಿದರು.

ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ಶಂಕರ್ ಬಿದರಿ ಅವರು ನಿವೃತ್ತಿಯ ನಂತರ ರಾಜಕೀಯ ಪ್ರವೇಶಿಸಲಿ ಎಂದು ಆಶಿಸಿದರು.ಎಸ್.ಆರ್. ಲಕ್ಷ್ಮೀಕಾಂತ ರೆಡ್ಡಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.