ADVERTISEMENT

ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 5:54 IST
Last Updated 8 ಏಪ್ರಿಲ್ 2013, 5:54 IST

ಹಿರಿಯೂರು: ಗಂಡಿಗಿಂತ ಹೆಣ್ಣು ಬಲಹೀನಳು ಎನ್ನುವುದು ಸಲ್ಲದು. ತೊಟ್ಟಿಲನ್ನು ತೂಗುವ ಕೈ ದೇಶ ಆಳಬಲ್ಲದು ಎನ್ನುವುದನ್ನು ಇಂದಿರಾಗಾಂಧಿ, ಸೋನಿಯಾಗಾಂಧಿ, ಬೆನಜೀರ್ ಭುಟ್ಟೋ ಮೊದಲಾದವರು ತೋರಿಸಿಕೊಟ್ಟಿದ್ದಾರೆ. ಪ್ರಯುಕ್ತ ಮಹಿಳೆಯರ ಜನಸಂಖ್ಯೆ ಆಧರಿಸಿ ರಾಜಕೀಯ ಮೀಸಲಾತಿ ಜಾರಿಗೆ ತರಬೇಕು ಎಂದು ಈಶ್ವರೀ ವಿದ್ಯಾಲಯದ ಸಂಚಾಲಕಿ ಗಾಯತ್ರಿ ಅಕ್ಕ ಆಗ್ರಹಿಸಿದರು.

ನಗರದ ಈಶ್ವರಿ ವಿದ್ಯಾಲಯದಲ್ಲಿ ಭಾನುವಾರ ತಾಲ್ಲೂಕು ಮಕ್ಕಳ ಸಾಹಿತ್ಯ ವೇದಿಕೆ, ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ  ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ರಾಜಕೀಯ ಮೀಸಲಾತಿ ಸಿಕ್ಕಾಗ ಮಾತ್ರ ಮಹಿಳಾ ಸಬಲೀಕರಣ ಆಗಲು ಸಾಧ್ಯ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ದೇಶದ ಘನತೆಯನ್ನು ಎತ್ತಿ ಹಿಡಿದಿದೆ. ಅವಕಾಶ ಕೊಡದೆಯೇ ಕೇವಲ ಟೀಕೆ ಮಾಡುವುದು ಸರಿಯಲ್ಲ ಎಂದು ಅವರು ತಿಳಿಸಿದರು.

ತಾಲ್ಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಜಿ. ರಂಗಸ್ವಾಮಿ ಸಕ್ಕರ ಅಧ್ಯಕ್ಷತೆ ವಹಿಸಿ ಮಾತನಾಡಿ,ಜೈವಿಕ ಆಧಾರದ ಮೇಲೆ ಪುರುಷರು ಸಮರ್ಥರು, ಮಹಿಳೆಯರು ಅಸಮರ್ಥರು ಎಂಬ ವಾದ ಸರಿಯಲ್ಲ. ಮಹಿಳೆಯರಲ್ಲಿರು ಸಾಮರ್ಥ್ಯಕ್ಕೆ ತಕ್ಕ ಅವಕಾಶ ಕೊಡಬೇಕಿದೆ. ಕುಟುಂಬದಲ್ಲಿ ಪುರುಷರಿಗೆ ಸರಿ ಸಮಾನವಾದ ಸ್ಥಾನ-ಮಾನ, ಗೌರವ ನೀಡಿದಲ್ಲಿ ಸಂಸಾರ ನೆಮ್ಮದಿಯಿಂದ ನಡೆಯುತ್ತದೆ. ಮಹಿಳೆಯರಿಗೆ ಉನ್ನತ ಶಿಕ್ಷಣ ಕೊಡಿಸಲು ಪೋಷಕರು ಮುಂದಾಗಬೇಕು. ಶಿಕ್ಷಣದಿಂದ ಮಾತ್ರ ತನ್ನ ಮೇಲೆ ನಡೆಯುವ ದೌರ್ಜನ್ಯವನ್ನು ಮಹಿಳೆ ಎದುರಿಸಲು ಸಮರ್ಥಳಾಗುತ್ತಾಳೆ ಎಂದರು.

ಡಾ.ಸಿ. ಶಿವಲಿಂಗಪ್ಪ, ಡಿ. ಧರಣೇಂದ್ರಯ್ಯ, ಚಳ್ಳಕೆರೆಯ ಸರಸ್ವತಮ್ಮ ಮಾತನಾಡಿದರು. ಎಂ.ಬಿ. ಲಿಂಗಪ್ಪ, ಆರ್. ತಿಪ್ಪೇಸ್ವಾಮಿ, ಮಂಗಳಗೌರಮ್ಮ, ಎಂ. ರಮೇಶ್‌ನಾಯ್ಕ, ಬಿ.ಎಲ್. ಶಿವಣ್ಣ, ನಾಗಸುಂದರಮ್ಮ, ಬಿ.ಎನ್. ನರಸಿಂಹಯ್ಯ, ಕಿರಣ್‌ಮಿರಜ್ಕರ್, ಜನಾರ್ದನಶೆಟ್ಟಿ, ಎಂ. ಮಂಜಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.