ADVERTISEMENT

ಮಾದಿಗ ಸಮಾಜದ ಜಾಗೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 5:20 IST
Last Updated 26 ಡಿಸೆಂಬರ್ 2012, 5:20 IST

ಭರಮಸಾಗರ: ಶೈಕ್ಷಣಿಕ ಪ್ರಗತಿ ಸಾಧಿಸದೇ ಮಾದಿಗ ಜನಾಂಗ ಬಡತನ, ನಿರುದ್ಯೋಗ, ಸಾಮಾಜಿಕ ಅಸಮಾನತೆ ಸಮಸ್ಯೆಯಿಂದ ಮುಕ್ತಿ ಪಡೆಯುವುದು ಅಸಾಧ್ಯ ಎಂದು ಕೆಪಿಸಿಸಿ ಸದಸ್ಯಡಾ.ಬಿ. ತಿಪ್ಪೇಸ್ವಾಮಿ ಹೇಳಿದರು.

ಇಲ್ಲಿನ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಾದಿಗ ಸಮಾಜದ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ದಲಿತರ ವಿಮುಕ್ತಿಯಾಗಬೇಕಾದರೆ ಕೇವಲ ಸಂವಹನ ಹೋರಾಟವಷ್ಟೆ ಸಾಲದು, ಜತೆಗೆ ರಾಜಕೀಯ ಶಕ್ತಿಯಿಂದ ಅಧಿಕಾರ ಪಡೆಯಬೇಕು ಎಂದರು. ಸದಾಶಿವ ಆಯೋಗದ ವರದಿ ಜಾರಿಯಿಂದ ಮಾದಿಗ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ ಮಾತನಾಡಿ, ಎಲ್ಲಾ ಸಮುದಾಯಗಳ ನಡುವೆ ಸಾಮರಸ್ಯ ಮೂಡಿದಾಗ ಮಾತ್ರ ಸಮಾನತೆಯ ಸಮಾಜ ಸ್ಥಾಪನೆ ಕನಸು ಸಾಕಾರಗೊಳ್ಳಲು ಸಾಧ್ಯ. ವಿನಾಕಾರಣ ಜಾತಿನಿಂದನೆ ಪ್ರಕರಣಗಳು ದಾಖಲಾಗದಂತೆ ನೋಡಿಕೊಳ್ಳುವ ಮೂಲಕ ಇತರ ಸಮುದಾಯದ ನಂಬಿಕೆ ವಿಶ್ವಾಸ ಪಡೆಯುವ ಅಗತ್ಯವಿದೆ ಎಂದು ತಿಳಿಸಿದರು.

ದಲಿತಪರ ಸಂಘಟನೆ ಒಕ್ಕೂಟದ ರಾಜ್ಯಾಧ್ಯಕ್ಷ ಭಾಸ್ಕರಪ್ರಸಾದ್ ಮಾತನಾಡಿ, ದೇಶದ ಸಾಮಾಜಿಕ ಶೋಷಿತ ದಲಿತ ವರ್ಗದ ಸ್ಥಿತಿಯನ್ನು ವೈಜ್ಞಾನಿಕ ಸಮೀಕ್ಷೆಯ ಮೂಲಕ ಪ್ರಗತಿ ಪಥದತ್ತ ಹೆಜ್ಜೆ ಹಾಕುವಂತೆ ಮಾಡಬೇಕಿದೆ. ಅದಕ್ಕಾಗಿ ಸದಾಶಿವ ಆಯೋಗದ ವರದಿ ಕಡ್ಡಾಯವಾಗಿ ಜಾರಿಗೊಳ್ಳಬೇಕು. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮಾದಿಗ ಸಮಾಜ ನ್ಯಾಯಯುತ ಬೇಡಿಕೆ ಈಡೇರಿಕೆಗೆ ನಡೆಸಿದ ಹೋರಾಟದ ಸಮಯದಲ್ಲಿ ನಡೆದ ಅಹಿತಕರ ಘಟನೆಗೆ ಮೀಸಲಾತಿ ವಿರೋಧಿಗಳ ಸಂಚು ಕಾರಣ. ಸೀರೆ, ಹೆಂಡ, ಹಣಕ್ಕೆ ಮಾರುಹೋಗದೆ ಚುನಾವಣೆ ಸಂದರ್ಭದಲ್ಲಿ ಮತ ಎನ್ನುವ ಅಸ್ತ್ರವನ್ನು ಪ್ರಾಮಾಣಿಕವಾಗಿ ಬಳಸಿದಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಶಿರೇಖಾ, ಕಾಂಗ್ರೆಸ್ ಮುಖಂಡ ಜೆ.ಇ. ಮಂಜುನಾಥ್, ಸಕ್ಲೇನ್‌ಪಾಷ, ಬಿ.ಕೆ. ಉಚ್ಚಂಗೆಪ್ಪ, ಎಚ್. ಶಿವಮೂತಿ, ದುರ್ಗೇಶ್‌ಪೂಜಾರ್, ಕೆ. ರುದ್ರೇಶ್, ಮಹಾಂತೇಶ್, ಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.