ADVERTISEMENT

ಮೌಲ್ಯಗಳ ಕೊರತೆ ಸಮಸ್ಯೆಗೆ ಕಾರಣ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 8:35 IST
Last Updated 22 ಸೆಪ್ಟೆಂಬರ್ 2011, 8:35 IST

ಚಿತ್ರದುರ್ಗ: ಸಮಾಜದಲ್ಲಿ ಉಂಟಾಗಿರುವ ಮೌಲ್ಯಗಳ ಅಧಃಪತನದಿಂದ ದೇಶ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ವಿನಯ ಬಿದರೆ ಅಭಿಪ್ರಾಯಪಟ್ಟರು.

ನಗರದ ಎಸ್‌ಜೆಎಂಐಟಿ ಆವರಣದಲ್ಲಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ತಾಂತ್ರಿಕ ಶಿಕ್ಷಣ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ  ಈಚೆಗೆ ಆಯೋಜಿಸಿದ್ದ `ಥಿಂಕ್ ಇಂಡಿಯಾ ನೇಷನ್ ಫಸ್ಟ್~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನ ಪ್ರಗತಿ ಸಾಧಿಸಿದ್ದರೂ ಇಂದು ದೇಶದಲ್ಲಿನ ಸಮಸ್ಯೆಗಳಿಗೆ ಪರಿಹಾರ ಹುಡುಕದಿದ್ದರೆ ತಂತ್ರಜ್ಞಾನವೇ ವ್ಯರ್ಥವಾಗುತ್ತದೆ. ಉನ್ನತ ಶಿಕ್ಷಣ ಪಡೆದ ವ್ಯಕ್ತಿಗಳಿಗಿಂತ ಈ ದೇಶದ ರೈತನಿಗೆ ಸಾಮಾಜಿಕ ಕಾಳಜಿ ಹೆಚ್ಚಾಗಿದೆ. ಆದ್ದರಿಂದ ಥಿಂಕ್ ಇಂಡಿಯಾ ಕಾರ್ಯಕ್ರಮದ ಮೂಲಕ ಉನ್ನತ ಶಿಕ್ಷಣ ಪಡೆಯುತ್ತಿರುವ ವ್ಯಕ್ತಿಗಳಿಗೆ ದೇಶದ ಬಗ್ಗೆ ಕಾಳಜಿ ಮೂಡಿಸುವ ಕೆಲಸಕ್ಕೆ ಎಬಿವಿಪಿ ಕೈ ಹಾಕಿದೆ ಎಂದು ತಿಳಿಸಿದರು.

ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಬೇರೆ ಸ್ಥಳದಲ್ಲಿ ಹುಡುಕುವ ಬದಲು ನಮ್ಮ ನಡತೆಗಳನ್ನು ತಿದ್ದುಕೊಳ್ಳುವ ಮೂಲಕ ನಮ್ಮಳಗೇ ಪರಿಹಾರ ಹುಡುಕಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಾಗಲಕೋಟೆ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಡಾ.ಶ್ರೀನಿವಾಸ ಬಳ್ಳಿ ಮಾತನಾಡಿ, ಈ ದೇಶದ ಸಮಸ್ಯೆಗಳಿಗೆ ಉತ್ತರಗಳನ್ನು ಹುಡುಕವವನೇ ನಿಜವಾದ ಎಂಜಿನಿಯರ್. 21ನೇ ಶತಮಾನ ತಂತ್ರಜ್ಞಾನದ ಪರ್ವವಾಗಿದ್ದರೂ ಭಾರತದ ಸ್ಥಿತಿಗತಿ ಇನ್ನೂ ಶೋಚನೀಯವಾಗಿದೆ ಎಂದರು.

ಕಾಲೇಜು ಪ್ರಾಂಶುಪಾಲ ಡಾ.ಎಸ್.ಬಿ. ಶಿವಕುಮಾರ್, ಎಸ್‌ಜೆಎಂಐಟಿಯ ಎಸ್. ಜಗದೀಶ್, ಟಿಎಸ್‌ವಿಪಿ ಕಾರ್ಯದರ್ಶಿ ಹನುಮಂತೇಗೌಡ, ನಗರ ಘಟಕದ ಹೇಮಂತ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.