ADVERTISEMENT

ವಾಣಿ ಸಕ್ಕರೆ ಕಾರ್ಖಾನೆ ಮಾರಾಟ ಮಾಡಲು ಬಿಡುವುದಿಲ್ಲ: ತಿಪ್ಪಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 5:39 IST
Last Updated 23 ಡಿಸೆಂಬರ್ 2013, 5:39 IST

ಧರ್ಮಪುರ: ಬಯಲು ಸೀಮೆಯ ರೈತರ ಜೀವನಾಡಿಯಾಗಿರುವ ಹಿರಿಯೂರು ವಾಣಿ ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡುವ ಹುನ್ನಾರ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ  ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ತಿಳಿಸಿದರು.

ಸಮೀಪದ ಖಂಡೇನಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶನೇಶ್ವರ ದೇವಸ್ಥಾನದ ಸಮುದಾಯ ಭವನದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್‌ ಸದಸ್ಯನಾಗಿದ್ದಾಗ ಸಮುದಾಯ ಭವನಕ್ಕೆ ಅನುದಾನ ನೀಡಲಾಗಿತ್ತು. ಇದೇ ರೀತಿ ಅನುದಾನದ ಸಮರ್ಪಕ ಬಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಹಿರಿಯೂರು ಕ್ಷೇತ್ರ ಬಲಿಷ್ಠ ಕ್ಷೇತ್ರವಾಗಿದ್ದು, ಈ ಭಾಗದ ಸಮಸ್ಯೆಗಳಾದ ಧರ್ಮಪುರ ಕೆರೆಗೆ ಫೀಡರ್‌ ಚಾನಲ್‌, ಧರ್ಮಪುರ ತಾಲ್ಲೂಕು ರಚನೆ ಹಾಗೂ ವಾಣಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನ ತುರ್ತಾಗಿ ಆಗಬೇಕಿದ್ದು ಇಲ್ಲಿಯ ಶಾಸಕರೊಂದಿಗೆ ಸಮಲೋಚಿಸಿ ಅನುಷ್ಠಾನಕ್ಕೆ ಹಂತ ಹಂತವಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಮುಂಬರುವ  ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ  ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದರ ಮೂಲಕ ಕೇಂದ್ರದಲ್ಲಿ  ನರೇಂದ್ರಮೋದಿ ಪ್ರಧಾನಿಯಾಗಬೇಕು ಎಂದರು.

ವೇದಿಕೆಯಲ್ಲಿ ರಾಮಚಂದ್ರಪ್ಪ, ತಿಮ್ಮರಾಯಪ್ಪ, ಧರ್ಮಪುರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಶಿವಣ್ಣ, ಜೆ.ಎಚ್‌.ರೆಡ್ಡಿ, ಲಕ್ಷ್ಮೀಪತಿ, ಕೃಷ್ಣಮೂರ್ತಿ, ಆನಂದ್‌, ಜಗದೀಶ್‌, ಗೋಪಾಲ್‌ರೆಡ್ಡಿ, ನಿಜಲಿಂಗಪ್ಪ, ನರಸಿಂಹಮೂರ್ತಿ, ಹನುಮಂತರಾಯ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.