ಭರಮಸಾಗರ: ಸಮೀಪದ ಕೊಳಹಾಳ್ ಗ್ರಾಮದಲ್ಲಿ ಜಾತ್ರೆ ಅಂಗವಾಗಿ ಭಾನುವಾರ ವೀರಭದ್ರಸ್ವಾಮಿ ಉಚ್ಛಾಯ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದ ಬಳಿಕ ಹೂವಿನ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿಯನ್ನು ಕರೆತಂದು ಅಲಂಕೃತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಲಾಯಿತು.
ದೇವರ ಭಾವಚಿತ್ರ, ಬಾವುಟ, ಹೂವಿನಹಾರ, ಕಾಣಿಕೆಹುಂಡಿ ಮೊದಲಾದ ಧಾರ್ಮಿಕ ವಸ್ತುಗಳ ಹರಾಜಿನ ನಂತರ ಉಚ್ಛಾಯವನ್ನು ಊರಿನ ಹೊರಗೆ ಇರುವ ಬನ್ನಿಮಂಟಪದವರೆಗೆ ಎಳೆದೊಯ್ದು ಪೂಜೆ ಸಲ್ಲಿಸಿ ಮರಳಿ ದೇವಸ್ಥಾನದ ಬಳಿ ಕರೆತರಲಾಯಿತು. ಸಮಾಳ, ನಂದಿಕೋಲು, ಡೊಳ್ಳುಕುಣಿತ, ಕೋಲಾಟ ವಿವಿಧ ಜನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಆಂಜನೇಯ ಸ್ವಾಮಿ ರಥೋತ್ಸವ
ಚಿಕ್ಕಜಾಜೂರು: ಸಮೀಪದ ಗುಂಜಿಗನೂರು ಗ್ರಾಮದ ಆಂಜನೇಯ ಸ್ವಾಮಿ ರಥೋತ್ಸವ ಭಾನುವಾರ ಅದ್ದೂರಿಯಾಗಿ ನಡೆಯಿತು.
ಹೂಗಳಿಂದ ಅಲಂಕಾರ ಮಾಡಿದ ರಥದಲ್ಲಿ ಆಂಜನೇಯಸ್ವಾಮಿ, ಕರಿಯಮ್ಮ ಹಾಗೂ ಕೊಪ್ಪದಮ್ಮ ದೇವಿಯರ ಉತ್ಸವ ಮೂರ್ತಿಗಳನ್ನು ಕೂರಿಸಲಾಯಿತು. ಇದಕ್ಕೂ ಮುನ್ನ ಮೂರೂ ಉತ್ಸವ ಮೂರ್ತಿಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ದೊಡ್ಡೆಡೆ ಸೇವೆಯನ್ನು ಸಲ್ಲಿಸಲಾಯಿತು.
ಬೆಳಿಗ್ಗೆ 10ಕ್ಕೆ ಸರಿಯಾಗಿ ಮಂಗಳಾರತಿ ಮಾಡುತ್ತಿದ್ದಂತೆ ನೆರೆದಿದ್ದ ನೂರಾರು ಭಕ್ತರು ರಥದ ಚಕ್ರಕ್ಕೆ ಈಡುಗಾಯಿ ಹೊಡೆದು ಭಕ್ತಿ ಸಮರ್ಪಿಸಿದರು. ನಂತರ ರಥವನ್ನು ಊರ ಹೊರಗಿನ ಲೋಕೇಶ್ವರ ದೇವಸ್ಥಾನದವರೆಗೆ ಎಳೆದು ತಂದರು.
ಮಹಿಳೆಯರು ರಥಕ್ಕೆ ಮಂಡಕ್ಕಿ ಮೆಣಸನ್ನು ಬೀರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.