ಚಿತ್ರದುರ್ಗ: ಹೊಸ ತರಕಾರಿ ಮಾರುಕಟ್ಟೆ ಮತ್ತು ವಾರದ ಸಂತೆ ನೆಲವಳಿ ಸುಂಕ ವಸೂಲಿ ಕುರಿತು ನಗರಸಭೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನಗರಸಭೆ ನಿಗದಿಪಡಿಸಿದ ಚಕ್ಕುಬಂದಿ ಹೊರತುಪಡಿಸಿ ಇತರ ಪ್ರದೇಶಗಳಲ್ಲೂ ಕೆಲವು ಗುತ್ತಿಗೆದಾರರು ಅಕ್ರಮವಾಗಿ ನೆಲವಳಿ ಸುಂಕ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.
ಪ್ರಸಕ್ತ ವರ್ಷದ ಮಾರ್ಚ್ನಲ್ಲಿ ನಡೆದ ಬಹಿರಂಗ ಹರಾಜಿನಲ್ಲಿ ಗುತ್ತಿಗೆ ನೀಡಲಾಗಿತ್ತು. ಹೊಸ ತರಕಾರಿ ಮಾರುಕಟ್ಟೆಯ ಪೂರ್ವದಲ್ಲಿ ಅಮೋಘ ಕಾಂಪ್ಲೆಕ್ಸ್ ಮೂಲೆಯಿಂದ ಕ್ರಿಸ್ಟೆಂಟ್ ಶಾಲೆವರೆಗೆ ಅಂದರೆ ದೊಡ್ಡ ಚರಂಡಿ ಗಡಿ ಹಾಗೂ ಪಶ್ಚಿಮದಲ್ಲಿ ದೀಪಾ ಹೋಟೆಲ್ನಿಂದ ಮೆದೇಹಳ್ಳಿ ರಸ್ತೆ ಮೂಲಕ ವೆಂಕಟೇಶ್ವರ ಚಿತ್ರಮಂದಿರದ ಕ್ರಾಸ್ವರೆಗೆ ಮತ್ತು ಉತ್ತರದಲ್ಲಿ ಕ್ರಿಸ್ಟೆಂಟ್ ಶಾಲೆ ಮೂಲೆಯಿಂದ ವೆಂಕಟೇಶ್ವರ ಚಿತ್ರಮಂದಿರದ ರಸ್ತೆ ಮೂಲಕ ಮೆದೇಹಳ್ಳಿ ರಸ್ತೆಯಲ್ಲಿರುವ ರಾಜಾ ಟೈಲ್ಸ್ವರೆಗೆ ಹಾಗೂ ದಕ್ಷಿಣಕ್ಕೆ ದೀಪಾ ಹೋಟೆಲ್ ಮೂಲೆಯಿಂದ ಸಂತೆಹೊಂಡ ರಸ್ತೆ ಮೂಲಕ ಹೊಟೇಲ್ ಅಮೋಘವರೆಗೆ ಚಕ್ಕುಬಂದಿ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಗುತ್ತಿಗೆದಾರರಿಗೆ ಯಾವುದೇ ರೀತಿಯ ಸುಂಕವನ್ನು ಪಾವತಿಸಬಾರದೆಂದು ವ್ಯಾಪಾರಸ್ಥರಿಗೆ ತಿಳಿಯಪಡಿಸಲಾಗಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.