ADVERTISEMENT

ಸಜ್ಜನರ ಕೈಯಲ್ಲಿ ಅಧಿಕಾರವಿರಲಿ: ಕೂಡಿಗೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 10:20 IST
Last Updated 18 ಫೆಬ್ರುವರಿ 2012, 10:20 IST

ಚಿತ್ರದುರ್ಗ: ಸಮರ್ಥರಿಗೆ ಮತ್ತು ಸಜ್ಜನರಿಗೆ ದೇಶ ಆಳುವ ಅಧಿಕಾರ ನೀಡುವ ಬಗ್ಗೆ  ಮತದಾರರು ಗಂಭೀರ ಚಿಂತನೆ ಮಾಡಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಶ್ರೀಕಂಠ ಕೂಡಿಗೆ ಕರೆ ನೀಡಿದರು.

ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರೀಡಾ- ಸಾಂಸ್ಕೃತಿಕ, ಎನ್‌ಎಸ್‌ಎಸ್ ಘಟಕದ  ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಆಡಳಿತ ಅನರ್ಹರ ಕೈಗೆ ನೀಡಿದ್ದು, ಈ ಬಗ್ಗೆ ಯುವ ಜನತೆ ಎಚ್ಚೆತ್ತುಕೊಳ್ಳಬೇಕು.  ಕರ್ನಾಟಕ ರಾಜ್ಯ ಸೇರಿದಂತೆ ದೇಶವನ್ನು ಆಳಲು ಅಸಮರ್ಥ ರಾಜಕಾರಣಿಗಳಿಗೆ ನೀಡಲಾಗಿದೆ. ಇದೇ ರೀತಿ ಮುಂದುವರಿದರೆ ದೇಶಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದರು.

ಯುವಜನತೆ ಎಂದಿಗೂ ಉತ್ಸಾಹ ಕಳೆದುಕೊಳ್ಳಬಾರದು.  ಸದಾ ಚೈತನ್ಯಶೀಲರಾಗಿರಬೇಕು.  ಪ್ರತಿ ಒಬ್ಬರಲ್ಲೂ ಪ್ರತಿಭೆ ಇರುತ್ತದೆ. ಮುಖ್ಯವಾಗಿ ಸೂಕ್ತ ಕಾಲದಲ್ಲಿ ಪ್ರತಿಭೆ ಅನಾವರಣಗೊಳಿಸಬೇಕು. ಯಾರೇ ಆದರೂ ಹುಟ್ಟಿನಿಂದಲೇ ಎಲ್ಲಾ ವಿಷಯವನ್ನು  ತಿಳಿದುಕೊಂಡಿರುಲ. ಹಂತ ಹಂತವಾಗಿ ಜ್ಞಾನರ್ಜನೆ ಮಾಡಿಕೊಂಡರೆ ಉತ್ತಮ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಕೆ. ಬಸವರಾಜನ್,  ಜಾತಿ ಆಧಾರದ ಮೇಲೆ ಉದ್ಯೋಗ ಪಡೆಯುವುದಕ್ಕಿಂತ  ಕೌಶಲ್ಯದಿಂದ ಉದ್ಯೋಗ ಪಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನ ವೃದ್ದಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳದೆ ಕಲಿಯುವ ವಯಸ್ಸಿನಲ್ಲಿ ಕಲಿತು  ಉದ್ಯೋಗವಂತರಾಗಬೇಕೆ ಹೊರತು ನಿರುದ್ಯೋಗಿಗಳಾಬೇಡಿ.  ಆಧುನಿಕ ಕಾಲದಲ್ಲಿ ಹಣ ಮುಖ್ಯ. ಹಣವಿದ್ದರೆ  ಎಲ್ಲರೂ ಬೆಲೆ ಕೊಡುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಯಾರ ಮೇಲೂ ಅವಲಂಬಿತರಾಗದೆ  ಹಣ ಗಳಿಸಿ ಸ್ವಾವಲಂಬಿ ಜೀವನ ನಡೆಸುವಂತೆ ಕಿವಿಮಾತು ಹೇಳಿದರು.

ನಗರಸಭೆ ಸದಸ್ಯ  ಸಿ.ಎನ್. ಕುಮಾರ್, ಪ್ರಾಂಶುಪಾಲ ಯಾದವರೆಡ್ಡಿ, ಉಪನ್ಯಾಸಕಿ ಅನುಪಮ ಮೊದಲಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿ. ಚನ್ನಬಸಪ್ಪ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.