ADVERTISEMENT

ಸೌಲಭ್ಯ ನಿರೀಕ್ಷೆಯಲ್ಲಿ ದೇವಸ್ಥಾನಗಳ ಗ್ರಾಮ `ದೇವಸಮುದ್ರ'

ಕೊಂಡ್ಲಹಳ್ಳಿ ಜಯಪ್ರಕಾಶ
Published 20 ಜೂನ್ 2013, 13:00 IST
Last Updated 20 ಜೂನ್ 2013, 13:00 IST

ಹಿಂದುಳಿದ ಮತ್ತು ಗಡಿಭಾಗದ ಮೊಳಕಾಲ್ಮುರು ತಾಲ್ಲೂಕಿನ ಎರಡು ಹೋಬಳಿಗಳ ಪೈಕಿ ದೇವಸಮುದ್ರ ಒಂದು ಹೋಬಳಿ ಕೇಂದ್ರವಾಗಿದೆ.

ದೇವಸಮುದ್ರವು ಗ್ರಾಮಪಂಚಾಯ್ತಿ ಕೇಂದ್ರವಾಗಿದ್ದು, ಇದರ ವ್ಯಾಪ್ತಿಗೆ ಆರು ಗ್ರಾಮಗಳು ಒಳಪಟ್ಟಿದ್ದು, ಈ ಪೈಕಿ ಉರ್ಥಾಳ್ ಗ್ರಾಮ ಆಂಧ್ರದ ಗಡಿಗೆ ಅಂಟಿಕೊಂಡಿದೆ. ಇಲ್ಲಿಂದ ಕೇವಲ 1 ಕಿ.ಮೀ ದೂರದಲ್ಲಿ ಆಂಧ್ರ ಪ್ರದೇಶವಿದೆ. ಇತಿಹಾಸ ಹೊಂದಿರುವ ದೇವಸಮುದ್ರ ರಾಜ, ಮಹಾರಾಜರ ಕಾಲದಲ್ಲಿಯೂ ತನ್ನದೇ ಆದ ವೈಶಿಷ್ಯವನ್ನು ಹೊಂದಿತ್ತು ಎಂಬುದನ್ನು ಇಲ್ಲಿರುವ ಕೆಲವು ಶಾಸನಗಳಲ್ಲಿ ಉಲ್ಲೇಖವಿದೆ.
ಬೆಂಗಳೂರು-ಬಳ್ಳಾರಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಗ್ರಾಮ ಹೆದ್ದಾರಿಯಿಂದ ಎರಡು ಕಿಮೀ ಒಳಗಡೆ ಇದೆ. ಪಕ್ಕದ ರಾಂಪುರ ಈ ಗ್ರಾಮದ ಪ್ರಮುಖ ಸಾರಿಗೆ ಕೇಂದ್ರ ಬಿಂದುವಾಗಿದೆ. 850 ಮನೆಗಳನ್ನು ಹೊಂದಿರುವ ಇಲ್ಲಿ 2,404 ಜನಸಂಖ್ಯೆ ಇದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಯಾದವ, ಕುಂಬಾರ, ಲಿಂಗಾಯಿತ, ಮುಸ್ಲಿಂ ಜನಾಂಗವು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು ಅನ್ಯೋನ್ಯವಾಗಿದ್ದಾರೆ.

ಗ್ರಾಮದಲ್ಲಿ ಈಶ್ವರಸ್ವಾಮಿ, ವೀರಭದ್ರಸ್ವಾಮಿ, ಬಸವೇಶ್ವರ, ಆಂಜನೇಯಸ್ವಾಮಿ, ವ್ಘಿೇಶ್ವರ, ಪಂಪಾಪತಿ, ನೀಲಕಂಠೇಶ್ವರ ಸೇರಿದಂತೆ ಅಪಾರ ದೇವಸ್ಥಾನಗಳು ಇರುವ ಕಾರಣವೇ ಗ್ರಾಮಕ್ಕೆ ದೇವಸಮುದ್ರ ಎಂಬ ಹೆಸರು ಬರಲು ಕಾರಣವಿರಬಹುದು, ಸಮೀಪದ ಜಟ್ಟಂಗಿ ರಾಮೇಶ್ವರ ಸ್ಥಳ ಕುರಿತ ಪುಸ್ತಕದಲ್ಲಿ ಇದನ್ನು ಉಲ್ಲೇಖಿಸಲಾಗಿದೆ ಎಂದು ಗ್ರಾಮದ ಹಿರಿಯ ಮುಖಂಡ ಹಾಗೂ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಪಿ.ಕೆ. ಕುಮಾರಸ್ವಾಮಿ ಹೇಳುತ್ತಾರೆ.

ಗ್ರಾಮಕ್ಕೆ ಹೊಂದಿಕೊಂಡಿರುವ ಬೃಹತ್ ಕೆರೆ ಈ ಗ್ರಾಮದ ಜೀವನ ಆಧಾರವಾಗಿದೆ. ದೂರದ ಪಕ್ಕುರ್ತಿ ಕೆರೆ ತುಂಬಿದ ನಂತರ ನೀರು ಈ ಕೆರೆಗೆ ಹರಿಯುತ್ತದೆ, ಮಳೆ ಕೊರತೆ ಕಾರಣ ಕಳೆದ 10 ವರ್ಷಗಳಿಂದ ಕೆರೆಗೆ ಸರಿಯಾಗಿ ನೀರು ಬರುತ್ತಿಲ್ಲ, ಆದ್ದರಿಂದ ಅಪಾರ ಅಚ್ಚುಕಟ್ಟು ಭೂಮಿಯನ್ನು ಬೀಳು ಬಿಡಲಾಗಿದೆ. ಕೆರೆ ತುಂಬಿಸುವ ಯೋಜನೆಗೆ ಮುಂದಾಗಬೇಕಿದೆ ಎಂದು ಗ್ರಾಮಸ್ಥರು ಮನವಿ ಮಾಡುತ್ತಾರೆ.

ಗ್ರಾಮದಲ್ಲಿ ಗ್ರಾಮಪಂಚಾಯ್ತಿ, ಸರ್ಕಾರಿ ಪ್ರೌಢಶಾಲೆ, ಆಯುರ್ವೇದ ಆಸ್ಪತ್ರೆ, ವಿಎಸ್‌ಎಸ್‌ಎನ್ ಬ್ಯಾಂಕ್ ಸೌಲಭ್ಯಗಳಿದ್ದು, ಪಿಯು ಕಾಲೇಜು ಸೌಲಭ್ಯ ಮತ್ತು ಆಸ್ಪತ್ರೆ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಬೇಕು, ರಾಷ್ಟ್ರೀಕೃತ ಬ್ಯಾಂಕ್ ಆರಂಭಿಸಬೇಕು, ಸೋಲಾರ್ ಬೀದಿ ದೀಪ ಅಳವಡಿಸಬೇಕು ಎಂದು ಗ್ರಾ.ಪಂ. ಅಧ್ಯಕ್ಷ ಅಂಜಿನಪ್ಪ ಮನವಿ ಮಾಡುತ್ತಾರೆ. ಇಲ್ಲಿನ ಸರ್ಕಾರಿ ಪ್ರೌಢಶಾಲೆ ಹಲವು ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಫಲಿತಾಂಶ ಪಡೆಯುವ ಮೂಲಕ ಗಮನ ಸೆಳೆದಿದೆ.

ಸಮೀಪದ ರಾಂಪುರ ಅಭಿವೃದ್ಧಿಗೂ ಮುನ್ನ ದೇವಸಮುದ್ರ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು, ಇಲ್ಲಿಂದ ತಮಿಳುನಾಡಿನ ಸೇಲಂಗೆ ಮಾರ್ಗವಿದ್ದು ಹಿಂದೆ ವ್ಯಾಪಾರ-ವಹಿವಾಟು ನಡೆಯುತ್ತಿತ್ತು. ಇಲ್ಲಿನ ಕುಂಬಾರಿಕೆ ವೃತ್ತಿ ಹೆಸರು ವಾಸಿಯಾಗಿದ್ದು, ಸುತ್ತಮುತ್ತ ತಾಲ್ಲೂಕುಗಳಿಗೆ ಈಗಲೂ ಅಪಾರ ಪ್ರಮಾಣದಲ್ಲಿ ಮಣ್ಣಿನ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ, ಕುಂಬಾರರಿಗೆ ಸಲ್ಲಬೇಕಾದ ಸೌಲಭ್ಯಗಳು ಮಾತ್ರ ಮಣ್ಣಿಲ್ಲಿಯೇ ಹೂತು ಹೋಗಿವೆ ಎಂಬ ದೂರು ಕೇಳಿಬರುತ್ತಿದೆ.

ಸುವರ್ಣಗ್ರಾಮ ಯೋಜನೆ ಗ್ರಾಮದಲ್ಲಿ ಅನುಷ್ಠಾನವಾಗಿದ್ದರೂ ಇನ್ನೂ ಹಲವು ಕಡೆ ಚರಂಡಿ, ರಸ್ತೆಗಳ ನಿರ್ಮಾಣ ಮಾಡಬೇಕಿದೆ. ಪರಿಶಿಷ್ಟ ಕಾಲೊನಿಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಶುದ್ಧ ಕುಡಿಯುವ ನೀರು ನೀಡುವ ನಿಟ್ಟಿನಲ್ಲಿ ನೀರು ಶುದ್ದೀಕರಣ ಘಟಕ ಆರಂಭಿಸಿದಲ್ಲಿ ಹೆಚ್ಚು ಅನುಕೂಲವಾಗುತ್ತದೆ. ಇದೇ ಗ್ರಾಮಪಂಚಾಯ್ತಿ ವ್ಯಾಪ್ತಿ ವಿಠಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪೂರ್ಣವಾಗಿ ಶಿಕ್ಷಕರೇ ಇಲ್ಲದಾಗಿದ್ದು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಡಿ.ಮಂಜುನಾಥ್ ಆಗ್ರಹಿಸುತ್ತಾರೆ.

ರಾಜ್ಯವನ್ನೇ ತಲ್ಲಣಗೊಳಿಸಿದ ಚಿಕುನ್‌ಗುನ್ಯಾ ಪ್ರಥಮವಾಗಿ ವರದಿಯಾಗಿದ್ದು, ದೇವಸಮುದ್ರದಲ್ಲಿ. ಆಗ 'ಪ್ರಜಾವಾಣಿ'ಯಲ್ಲಿ ಬಂದ ವರದಿ ನಂತರ ಎಚ್ಚೆತ್ತುಕೊಂಡ ವಿಜ್ಞಾನಿಗಳು ಇಲ್ಲಿಗೆ ಭೇಟಿ ನೀಡಿ ರೋಗವನ್ನು ಚಿಕುನ್‌ಗುನ್ಯಾ ಎಂದು ಗುರುತಿಸಿದರು. ಪತ್ರಿಕೆಯಲ್ಲಿ ವರದಿ ಬರುವ ಮುನ್ನ ಇಡೀ ಗ್ರಾಮಕ್ಕೆ ಮಾಟ, ಮಂತ್ರ ಮಾಡಿಸಲಾಗಿದೆ, ಜನರಿಗೆ ಓಡಾಡಲು ಬರುತ್ತಿಲ್ಲ, ಕೈಕಾಲು ಬಾವು ಬಂದಿವೆ, ನಿತ್ರಾಣವಾಗಿ ಬೀಳುತ್ತಿದ್ದಾರೆ ಎಂಬ ವದಂತಿ ಹಬ್ಬಿದ್ದನ್ನು ಇಲ್ಲಿ ಸ್ಮರಿಸಬೇಕಾಗಿದೆ. ಈಗಲೂ ರೋಗ ಲಕ್ಷಣಗಳು ಕೆಲವರಲ್ಲಿ ಉಳಿದುಕೊಂಡಿವೆ ಎನ್ನುತ್ತಾರೆ ಗ್ರಾಮಸ್ಥರು.

ಸಮೀಪದ ಜಟ್ಟಂಗಿ ರಾಮೇಶ್ವರ ಬೆಟ್ಟದ ಮೇಲೆ ಯುಗಾದಿ ಹಬ್ಬದಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ, ಇದೇ ದಿನ ಬೆಟ್ಟದ ತಪ್ಪಲಿನಲ್ಲಿರುವ ಪರಮೇಶ್ವರ ತಾತಾ ಚೌಕಿಮಠ ಆವರಣದಲ್ಲಿ ಜಾತ್ರೆ ನಡೆಯುವುದು ಧಾರ್ಮಿಕ ವಿಶೇಷ. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಒತ್ತು ನೀಡಲಿ ಎಂದು ಗಾಮಸ್ಥರು ಮನವಿ ಮಾಡಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.