ಹಿರಿಯೂರು: ಕೆಲವು ವರ್ಷಗಳ ಹಿಂದೆ ಖ್ಯಾತ ಹಾಸ್ಯ ಕಲಾವಿದ ವೈ.ಎಂ. ನರಸಿಂಹಮೂರ್ತಿ ಅವರಿಂದ ಉದ್ಘಾಟನೆಗೊಂಡು ಹತ್ತಾರು ಹಾಸ್ಯ ಕಾರ್ಯಕ್ರಮ ನಡೆಸುವ ಮೂಲಕ ನಗರದ ಜನತೆಯ ಮನೆ ಮಾತಾಗಿದ್ದ `ಹಾಸ್ಯ ಪ್ರಿಯರ ಸಂಘ~ ಅನಿವಾರ್ಯ ಕಾರಣಗಳಿಂದ ತನ್ನ ಚಟುವಟಿಕೆಯನ್ನು ಸ್ಥಗಿತಗೊಳಿಸಿದ್ದು, ಈಗ ನ. 25ರಂದು ನಗೋಣ ಬಾ ಕಾರ್ಯಕ್ರಮ ನಡೆಸುವ ಮೂಲಕ ಮತ್ತೆ ಆರಂಭಗೊಳ್ಳಲಿದೆ ಎಂದು ಸಂಘದ ಕಾರ್ಯದರ್ಶಿ ಎಚ್.ಎಂ. ಬಸವರಾಜ್ ಹೇಳಿದರು.
ನಗರದ ಲಕ್ಷ್ಮಮ್ಮ ತಿಮ್ಮಯ್ಯ ಕಲ್ಯಾಣ ಮಂಟಪದಲ್ಲಿ ಈಚೆಗೆ ನ. 25 ರಂದು ನಡೆಸಲು ಉದ್ದೇಶಿಸಿರುವ `ನಗೋಣ-ಬಾ~ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಇಂದು ಒತ್ತಡದ ಜೀವನದಿಂದಾಗಿ ಮನುಷ್ಯ ನಗುವನ್ನು ಮರೆಯುತ್ತಿದ್ದಾನೆ. ಸದಾ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಆತಂಕ-ಉದ್ರೇಕ ಕಾಡುತ್ತಿರುತ್ತದೆ. ಇಂತಹ ಮನಸ್ಥಿತಿಯಿಂದ ಬಿಡುಗಡೆ ಪಡೆಯಲು ನಗು ಸಿದ್ಧ ಔಷಧ. ನಗುವಿನಂದಲೇ ನಮ್ಮ ಅನೇಕ ರೋಗ ದೂರಮಾಡಿಕೊಳ್ಳಬಹುದು.
ಹೀಗಾಗಿ ಹಾಸ್ಯ ಪ್ರಿಯರ ಸಂಘಕ್ಕೆ ಮರು ಚಾಲನೆ ನೀಡಿದೆ. ತಮ್ಮ ಸಂಘ ಕೇವಲ ಹಾಸ್ಯಪಟುಗಳನ್ನು ಕರೆಸಿ ಜೋಕ್ ಹೇಳಿಸುವುದಕ್ಕೆ ಸೀಮಿತವಾಗೋದಿಲ್ಲ. ನಗೆ ನಾಟಕ, ನಗೆ ಕವನ ವಾಚನ, ನಗೆಯ ಕತೆ ಕುರಿತ ರಾಜ್ಯಮಟ್ಟದ ಸ್ಪರ್ಧೆ ಏರ್ಪಡಿಸುವುದು, ವರ್ಷದಲ್ಲಿ ಕನಿಷ್ಠ 3 ಬಹಿರಂಗ ಹಾಸ್ಯ ಕಾರ್ಯಕ್ರಮ ನಡೆಸುವುದು, ಜತೆಗೆ ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ತಿಂಗಳಿಗೊಂದು ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.
ನ. 25 ರಂದು ಸಂಜೆ ನೆಹರು ಮೈದಾನದಲ್ಲಿರುವ ರೋಟರಿ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಪ್ರಾಯೋಜಿಸಲು ಶಾಸಕ ಡಿ. ಸುಧಾಕರ್ ಒಪ್ಪಿದ್ದು, 2000 ಪ್ರೇಕ್ಷಕರಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತದೆ ಎಂದು ಬಸವರಾಜ್ ತಿಳಿಸಿದರು. ಸಂಘದ ಅಧ್ಯಕ್ಷೆ ಎಚ್.ವಿ. ಶ್ರೀನಿವಾಸನ್, ಎಚ್.ಆರ್. ಕಣ್ಣಪ್ಪ, ಡಾ. ಶ್ರೀಪತಿ, ಸಿ.ಎನ್. ಸುಂದರ್, ಕೆ.ಆರ್. ವೀರಭದ್ರಯ್ಯ, ಎಚ್.ಪಿ. ರವೀಂದ್ರನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.