ADVERTISEMENT

ಹೆಚ್ಚುವರಿ ರೈಲು ಸಂಚಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 8:55 IST
Last Updated 19 ಸೆಪ್ಟೆಂಬರ್ 2011, 8:55 IST

ಮೊಳಕಾಲ್ಮುರು: ಮೊಳಕಾಲ್ಮುರು ಮತ್ತು ಚಳ್ಳಕೆರೆ ಮಾರ್ಗವಾಗಿ ಹೆಚ್ಚುವರಿ ರೈಲು ಗಾಡಿಗಳನ್ನು ಓಡಿಸುವಂತೆ ಆಗ್ರಹಿಸಿ ಶನಿವಾರ ಅಖಿಲ ಭಾರತ ಯುವಜನಒಕ್ಕೂಟದ ಕಾರ್ಯಕರ್ತರುಇಲ್ಲಿನ ರೈಲ್ವೆನಿಲ್ದಾಣದಲ್ಲಿ ಸಾಂಕೇತಿಕವಾಗಿ ಕೆಲಕಾಲ ರೈಲುತಡೆ ನಡೆಸಿ ಪ್ರತಿಭಟಿಸಿದರು.

ಈ ಎರಡೂ ತಾಲ್ಲೂಕಗಳು ಆರ್ಥಿಕವಾಗಿ ಹಿಂದುಳಿದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ವರ್ಗಗಳ ಜನರನ್ನು ಹಾಗೂ ಕೂಲಿ ಕಾರ್ಮಿಕರನ್ನು ಹೊಂದಿದೆ.
 
ಇಲ್ಲಿ ಬ್ರಾಡ್‌ಗೇಜ್ ರೈಲುಮಾರ್ಗ ಹಾದು ಹೋಗಿದ್ದರೂ ಸಹ ಸಮರ್ಪಕವಾಗಿ ಪ್ರಯಾಣಿಕ ರೈಲುಗಳನ್ನು ಬಿಡದ ಹಿನ್ನೆಲೆಯಲ್ಲಿ ದುಬಾರಿ ವೆಚ್ಚ ಭರಿಸಿ ಬಸ್ಸುಗಳಲ್ಲಿ ಸಂಚರಿಸಬೇಕಾಗಿದೆ.ಇದು ಸಾಧ್ಯವಾಗದಿದ್ದರೂ ಅನಿವಾರ್ಯವಾಗಿ ಸಂಚರಿಸಲೇಬೇಕು ಎಂಬ ಸ್ಥಿತಿ ಉಂಟಾಗಿದೆ ಎಂದು ಕಾರ್ಯಕರ್ತರು ದೂರಿದರು.

ಕೇಂದ್ರ ಸರ್ಕಾರ ನೂತನನಾಗಿ ಮೊಳಕಾಲ್ಮುರಿಗೆ ಸಮೀಪದ ರಾಯದುರ್ಗದಿಂದ ಪಾವಗಡ, ಮಧುಗಿರಿ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ರೈಲು ಮಾರ್ಗ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದೆ. ಇದಕ್ಕೆ ಅ. 2ರಂದು ಶಂಕುಸ್ಥಾಪನೆ ನಿಗದಿಯಾಗಿದೆ.
 
ಈ ಮಾರ್ಗವನ್ನು ಮೊಳಕಾಲ್ಮುರು ಹಾಗೂ ಚಳ್ಳಕೆರೆ ಮಾರ್ಗವಾಗಿ ಪರಿವರ್ತನೆ ಮಾಡಬೇಕು ಇದರಿಂದ ಈ ಭಾಗದ ಪ್ರಯಾಣಿಕರು ಬೆಂಗಳೂರು ಕಡೆಗೆ ಸಂಚರಿಸಲು ಅನುಕೂಲವಾಲಿದೆ ಎಂದರು.ಚಿತ್ರದುರ್ಗದಿಂದ ಚಳ್ಳಕೆರೆ, ಮೊಳಕಾಲ್ಮುರು, ರಾಯದುರ್ಗ, ಬಳ್ಳಾರಿ ಮಾರ್ಗವಾಗಿ ತಿರುಪತಿಗೆ ಹಾಗೂ ಚಿತ್ರದುರ್ಗದಿಂದ ಬಳ್ಳಾರಿ ಮಾರ್ಗವಾಗಿ ಶಿರಡಿಗೆ ಪ್ರಯಾಣಿಕ ರೈಲುಗಳನ್ನು ನೂತನವಾಗಿ ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯಿಂದ ಆಗಮಿಸಿದ್ದ ಅಧಿಕಾರಿ ಸುಧೀರ್ ಗವಾಯಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಸಿಪಿಐ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪಟೇಲ್ ಪಾಪನಾಯಕ, ಯುವಜನ ಒಕ್ಕೂಟದ ಜಾಫರ್ ಷರೀಫ್, ಸಲೀಂ, ಮಲ್ಲಿಕಾರ್ಜುನ್, ನಾಗಸಮುದ್ರ ನಾಗೇಂದ್ರಪ್ಪ, ವೀರೇಶ್, ನಾಗೇಶ್ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.