ADVERTISEMENT

ಹೆಸರು ಬೆಳೆಗೆ ಕಂಬಳಿ ಹುಳು ಕಾಟ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 10:01 IST
Last Updated 14 ಜೂನ್ 2013, 10:01 IST

ಹೊಸದುರ್ಗ: ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಅನೇಕ ಗ್ರಾಮಗಳ ಹೆಸರು ಬೆಳೆ ಕೆಂಪು ತಲೆ ಕಂಬಳಿ ಹುಳುಗಳ ಹಾವಳಿಯಿಂದ ಹಾನಿಯಾಗಿದ್ದು, ರೈತರನ್ನು  ಇದು ಆಂತಕಕ್ಕೀಡುಮಾಡಿದೆ.

ಈ ಬಗ್ಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಹಂಸವೇಣಿ ರೈತರಿಗೆ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಬೆಳೆ ರಕ್ಷಣೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದ್ದಾರೆ.

ಹೆಸರು ಬೆಳೆಯು 10-25 ದಿನಗಳ ಬೆಳವಣಿಗೆಯ ಹಂತದಲ್ಲಿದೆ. ಈ ಬೆಳೆ ರಕ್ಷಿಸಲು ಕಂಬಳಿ ಹುಳುವಿನ ಮೊಟ್ಟೆಗಳ ನಾಶ, ಕಂದಕಗಳ ನಿರ್ಮಾಣ, ಬದುಗಳ ಸ್ವಚ್ಛತೆ ಕಾಪಾಡುವುದು, ಕ್ರಿಮಿ ನಾಶಕ ಬಳಕೆ, ದೂಳು ರೂಪದ ಕೀಟನಾಶಕಗಳ ನಾಶ, ವಿಷ ಪಾಷಾಣದ ಬಳಕೆಯ ಮುಂಜಾಗೃತಾ ಕ್ರಮಗಳನ್ನು ರೈತರು ಅನುಸರಿಸುವಂತೆ ಅವರು ಸಲಹೆ ನೀಡಿದ್ದಾರೆ.

2 ವರ್ಷಗಳಿಂದ ಸಕಾಲಕ್ಕೆ ಮಳೆಯಾಗದ ಕಾರಣ ರೈತರು  ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಮುಂಗಾರು ಮಳೆಗೆ ಹೆಸರು ಬೆಳೆದು ಬ್ಯಾಂಕ್ ಸಾಲ ತೀರಿಸುವ ಆಸೆಯೊಂದಿಗೆ ರೈತರು ಬಿತ್ತನೆ ಕಾರ್ಯ ಮಾಡಿದ್ದರು.  ಕಂಬಳಿ ಹುಳುಗಳ ಕಾಟದಿಂದ ರೈತರು ಆತಂಕದಲ್ಲಿದ್ದಾರೆ.

ತಾಲ್ಲೂಕಿನಲ್ಲಿ 8 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆಯಾಗಬೇಕಿದ್ದ ಹೆಸರು ಬೆಳೆ, ಈ ಬಾರಿ ತಡವಾಗಿ ಆರಂಭವಾದ ಮುಂಗಾರಿನಿಂದಾಗಿ ಕೇವಲ 3.75 ಸಾವಿರ ಹೆಕ್ಟೇರ್‌ನಷ್ಟು ಮಾತ್ರ ಬಿತ್ತನೆಯಾಗಿದೆ. ಹಾಗೆಯೇ ಎಳ್ಳು ಬೆಳೆಯ ಬಿತ್ತನೆಯ ಕ್ಷೇತ್ರ ಕಳೆದ ಬಾರಿಗಿಂತ ಸಾಕಷ್ಟು ಕಡಿಮೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಹಂಸವೇಣಿ ತಿಳಿಸಿದ್ದಾರೆ.ಬೆಳೆ ರಕ್ಷಣೆಯ ಶಾಶ್ವತ ಪರಿಹಾರ ಕ್ರಮಕ್ಕೆ ಇಲಾಖೆಯು ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.